ಬೆಂಗಳೂರು: ಬೆಳ್ಳಂಬೆಳಗ್ಗೆ ನಟೋರಿಯಸ್ ರೌಡಿಶೀಟರ್ಗಳ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲಿವೆ. ಮಚ್ಚು ಹಿಡಿದು, ಹಾಡುಹಗಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡುತ್ತೀರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ, ನಗರದ್ಯಾಂತ ಏಕಕಾಲಕ್ಕೆ ಎರಡು ಸಾವಿರಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮಾರಕಾಸ್ತ್ರಗಳು, ನಗದು, ಆಸ್ತಿ ಪತ್ರಗಳು ಎಲ್ಲವು ಸಿಕ್ಕಿದ್ದವು. ಆದರೆ ಈ ದಾಳಿಯಲ್ಲಿ ನಗರದ ಫಸ್ಟ್ ಗ್ರೇಡ್ ರೌಡಿಗಳು ಅನ್ನಿಸಿಕೊಂಡಿರೋ ಖತಾರ್ನಾಕ್ ನಟೋರಿಯಸ್ ರೌಡಿಗಳು ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದರು. ಈ ನಿಟ್ಟಿನಲ್ಲಿ ವರ್ಕ್ ಮಾಡುತ್ತಿದ್ದ ಪೊಲೀಸರು, ಇಂದು ಅಂತಹ ನಟೋರಿಯಸ್ ರೌಡಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಂಗುರ ಸಾರಿ ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ
ಪ್ರಮುಖ ನಟೋರಿಯಸ್ಗಳಾದ ಸೈಲೆಂಟ್ ಸುನೀಲ್, ಸೈಕಲ್ ರವಿ, ಜೆಬಿ ನಾರಾಯಣ, ವಿಲ್ಸನ್ ಗಾರ್ಡನ್ ನಾಗ, ಸೇರಿದ್ದಾರೆ. ಈ ನಾಲ್ವರು ಮತ್ತು ಇವರ ಸಹಚರರು ಸೇರಿದಂತೆ ನಲವತ್ತಕ್ಕೂ ಹೆಚ್ಚು ರೌಡಿಗಳ ಮನೆಗಳ ದಾಳಿ ನಡೆಸಿದ್ದಾರೆ. ನಗದು, ಮಾರಕಾಸ್ತ್ರಗಳು, ಆಸ್ತಿ ಪತ್ರಗಳು, ರಾಶಿ ರಾಶಿ ಅಧಾರ್ ಕಾರ್ಡ್ಗಳು, ದೊಡ್ಡ ಮಟ್ಟದ ಡೀಲ್ ಪತ್ರಗಳು ಸಿಕ್ಕಿದ್ದು, ಪೊಲೀಸರ ದಾಳಿ ಮುಂದುವರಿದಿದೆ.
ನಗರದಲ್ಲಿ ನಡೆಯುವ ಪ್ರಮುಖ ಡೀಲ್ಗಳು, ರೌಡಿಗಳ ಮರ್ಡರ್ಗಳು, ಸುಫಾರಿ ಸೇರಿದಂತೆ ಎಲ್ಲದಕ್ಕೂ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇವತ್ತಿನ ದಾಳಿಯಲ್ಲೂ ಸಾಕಷ್ಟು ಜನ ರೌಡಿಗಳು ಎಸ್ಕೇಪ್ ಆಗಿರೋದು ಗೊತ್ತಾಗಿದ್ದು, ಹಲವರು ಬೆಂಗಳೂರು ಬಿಟ್ಟು ಹೊರವಲಯಗಳಿಂದಲೇ ಡೀಲ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಸಿಸಿಬಿ ಪೊಲೀಸರ ದಾಳಿ ಮುಂದುವರಿದಿದ್ದು, ಯಾರೆಲ್ಲಾ ಪೊಲೀಸರ ಕೈಗೆ ಸಿಕ್ಕಬಿಳುತ್ತಾರೆ, ಯಾರ ಮನೆಗಳಲ್ಲಿ ಏನೆಲ್ಲಾ ಪತ್ತೆಯಾಗುತ್ತವೆ ಅನ್ನೋದು ತಿಳಿಯಬೇಕಿದೆ.