ವಿಜಯಪುರ: ಡೀಸೆಲ್ ತರುವುದಾಗಿ ಹೇಳಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋದ ಯುವಕನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ನಗರದ ಎಸ್ಪಿ ಕಛೇರಿ ಹಿಂಭಾಗದ ಕುಂಬಾರ ಓಣಿಯ ನಿವಾಸಿ ಅಕ್ಷಯ ಲವಗಿ ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ಡೀಸೆಲ್ ತರುವುದಾಗಿ ಹೇಳಿ ಅಕ್ಷಯ ಮನೆಯಿಂದ ತೆಳಿದ್ದ. ಆದರೆ ಮರಳಿ ಮನೆಗೆ ಬಂದಿರಲಿಲ್ಲ. ನಾಪತ್ತೆಯಾಗಿದ್ದ ಅಕ್ಷಯ ಮೃತದೇಹ ನಿನ್ನೆ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ಬಳಿ ಪತ್ತೆಯಾಗಿದೆ.
ಮೃತ ಅಕ್ಷಯ ಮನೆಗೆ ವಾಪಸ್ ಆಗದಿದ್ದ ಕಾರಣ ಆತನ ಪೋಷಕರು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ನಿನ್ನೆ ಅಕ್ಷಯನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಷಯ ಮನೆಯಿಂದ ತೆಗೆದು ಹೋಗಿದ್ದ ಸ್ಕೂಟರ್ ಸಹ ಮೃತದೇಹದ ಸಮೀಪ ಪತ್ತೆಯಾಗಿದ್ದು, ದೇಹ ಸುಟ್ಟು ಕರಕಲಾದ ಕಾರಣದಿಂದ ಬೈಕ್ ನೆರವಿನೊಂದಿಗೆ ಆತನ ಗುರುತನ್ನು ಪತ್ತೆ ಮಾಡಲಾಗಿದೆ.
ಯುವಕನ್ನು ಉಸಿರು ಗಟ್ಟಿಸಿ ಕೊಲೆ ಮಾಡಿ ಬಳಿಕ ಸುಟ್ಟು ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ, ಬಬಲೇಶ್ವರ ಪಿಎಸ್ಐ ಕಲ್ಲೂರ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.