ಮುಂಬೈ: ಕಾರೊಂದು ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಭಾನುವಾರ ಮಧ್ಯರಾತ್ರಿ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದೆ.
ಈ ಘಟನೆ ಔರಂಗಾಬಾದ್ನಿಂದ 60 ಕಿ.ಮೀ ದೂರದಲ್ಲಿರುವ ದೇವ್ಗಡ್ ಫಟಾದಲ್ಲಿ ನಡುರಾತ್ರಿ ಸುಮಾರು 2 ಗಂಟೆಗೆ ಸಂಭವಿಸಿದೆ.
ಘಟನೆ ವಿಚಾರವಾಗಿ ಅಹ್ಮದ್ನಗರದ ಪೊಲೀಸ್ ನಿಯಂತ್ರಣ ಅಧಿಕಾರಿಯೊಬ್ಬರು, ಔರಂಗಾಬಾದ್ ಮಾರ್ಗದಿಂದ ಅಹ್ಮದ್ ನಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಗೆ ಕಾರು ಡಿಕ್ಕಿ ಹೊಡೆದಿದೆ. ಅಲ್ಲದೆ ಕಾರು ರಸ್ತೆ ವಿಭಜಕಕ್ಕೆ(ಡಿವೈಡರ್) ಡಿಕ್ಕಿ ಹೊಡೆದು ಮೇಲೆ ಹಾರಿ ಬಳಿಕ ಎದುರಿಗೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಮೃತಪಟ್ಟ ಐವರು ಕೂಡ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಿವಾಸಿಗಳಾಗಿದ್ದು, ಶಾಂತನು ನಾರಾಯಣ್ ಕಾಕ್ಡೆ(35), ಕೈಲಾಸ್ ನ್ಯೂರೆ(35), ವಿಷ್ಣು ಚವಾಣ್(31), ರಮೇಶ್ ದಶರ್ ಘುಗೆ(40) ಮತ್ತು ಕಾರು ಚಾಲಕ ನಾರಾಯಣ್ ವರ್ಕಡ್(23) ಎಂದು ಗುರುತಿಸಲಾಗಿದೆ. ಇದೀಗ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.