– ಕೊಲೆಗೆ ಮತ್ತೋರ್ವನ ಸಾಥ್
– ಎರಡು ತಿಂಗಳ ಬಳಿಕ ಆರೋಪಿಗಳ ಬಂಧನ
ಲಕ್ನೋ: ಎರಡು ತಿಂಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನ ಉತ್ತರ ಪ್ರದೇಶ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಕೊಲೆಗೆ ಬಳಸಲಾದ ಗನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
ಆಗಸ್ಟ್ 28ರಂದು ಚಂದೌಲಿಯ ಧುರಿ ಕೋಟ್ ಗ್ರಾಮದ ಬಳಿ ರಾಕೇಶ್ ರೋಶನ್ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಪೊಲೀಸರಿಗೆ ಸುಳಿವು ಸಿಗದೇ ಪ್ರಕರಣ ತಲೆನೋವು ಆಗಿತ್ತು. ಕೊನೆಗೆ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದು, ಇಬ್ಬರನ್ನ ಬಂಧಿಸಿದ್ದಾರೆ. ಅಕ್ಟೋಬರ್ 29ರಂದು ಎನ್ಕೌಂಟರ್ ಪ್ರಕರಣದಲ್ಲಿ ಅಶುತೋಷ್ ಯಾದವ್ ಆರೋಪಿಯನ್ನ ಪೊಲೀಸರು ಬಂಧಿಸಿದ್ದರು.
ಬಂಧಿತ ಅಶುತೋಷ್ ಎರಡು ತಿಂಗಳ ಹಿಂದೆ ನಡೆದ ರಾಕೇಶ್ ರೋಶನ್ ಕೊಲೆ ಕಥೆಯನ್ನ ಪೊಲೀಸರಿಗೆ ಹೇಳಿದ್ದಾನೆ. ಮುಖೇಶ್ ಯಾದವ್ ಎಂಬಾತನೇ ರಾಕೇಶ್ ಕೊಲೆ ಮಾಡಿದ್ದು, ಅದಕ್ಕೆ ತಾನು ಸಾಥ್ ನೀಡಿರುವ ವಿಷಯವನ್ನ ಅಶುತೋಷ್ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದನು. ಅಶುತೋಷ್ ಹೇಳಿಕೆಯನ್ನಾಧರಿಸಿ ಪೊಲಿಸರು ಮುಖೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಣ್ಣನ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ.
ತನ್ನ ಪತ್ನಿ ಅಣ್ಣನ ಜೊತೆ ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆ ಕೊಲೆ ಮಾಡಿರೋದಾಗಿ ಆರೋಪಿ ಮುಖೇಶ್ ಹೇಳಿದ್ದಾನೆ. ಮೂರು ವರ್ಷಗಳ ಹಿಂದಿನ ಪ್ರಕರಣದಲ್ಲಿ ಮುಖೇಶ್ ಜೈಲುಪಾಲಾಗಿದ್ದ ವೇಳೆ ಆತನ ಪತ್ನಿ ಬಾವನ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿದದ್ದಳು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದ ಮುಖೇಶ್ ನಿಗೆ ಕಳ್ಳ ಸಂಬಂಧ ವಿಷಯ ತಿಳಿದಿತ್ತು.
ಅಣ್ಣನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ ಮುಖೇಶ್ ಸೋದರನ ಕೊಲೆಗೆ ಜೈಲಿನಲ್ಲಿ ಪರಿಚತನಾಗಿದ್ದ ಅಶುತೋಷ್ ಸಹಾಯ ಪಡೆದುಕೊಂಡಿದ್ದನು. ಇಬ್ಬರು ಪ್ಲಾನ್ ಊರಿನ ಹೊರಗೆ ರಾಕೇಶ್ ನನ್ನ ಕರೆ ತಂದು ಗುಂಡು ಹಾರಿಸಿ ಕೊಲೆ ಮಾಡಿದ್ದರು.