– ಏ.7ರಿಂದ ರೂಲ್ಸ್ ಜಾರಿ
ಬೆಂಗಳೂರು: ಕೊನೆಗೂ ಚಿತ್ರರಂಗದ ಆಕ್ರೋಶಕ್ಕೆ ಮಣಿದ ಸರ್ಕಾರ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಹೌದು. ನಿನ್ನೆಯಷ್ಟೇ ಸರ್ಕಾರ ರಾಜ್ಯದ 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶಕ್ಕಾಗಿ ಆದೇಶ ನೀಡಿತ್ತು. ಸರ್ಕಾರದ ಆದೇಶದ ಬೆನ್ನಲ್ಲೇ ನಟ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್ ಸೇರಿದಂತೆ ಇಡೀ ಚಿತ್ರರಂಗವೇ ಸರ್ಕಾರದ ವಿರುದ್ಧ ತಿರುಗಿ ಬಿತ್ತು. ಸರ್ಕಾರದ ಆದೇಶಕ್ಕೆ ಖಂಡನೆ ವ್ಯಕ್ತವಾಗಿತ್ತು.
ಕನ್ನಡ ಸಿನಿಮಾಗಳ ಟಿಕೆಟ್ ಮುಂಗಡ ಬುಕಿಂಗ್ ಆಗಿತ್ತು. ಹೀಗಾಗಿ ನಿರ್ಬಂಧ ಸಡಿಲಿಕೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಯುವರತ್ನ ಚಿತ್ರತಂಡ ಇಂದು ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸುತ್ತೇವೆ. ಆದರೆ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ತುಂಬಾ ನಷ್ಟವಾಗಲಿದೆ ಎಂದು ಪುನೀತ್ ರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಥಿಯೇಟರ್ಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಿ- ಸಿಎಂಗೆ ಪುನೀತ್ ಮನವಿ
ಈ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿ ಪುರಸ್ಕರಿಸಿದ ಸರ್ಕಾರ, ಸಿನಿಮಾ ಥಿಯೇಟರ್ ಗಳಲ್ಲಿ ಏಪ್ರಿಲ್ 7 ರ ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. ಈ ಮೂಲಕ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಸರ್ಕಾರ, ಏಪ್ರಿಲ್ 6 ರ ಮಧ್ಯರಾತ್ರಿವರೆಗೆ ನಿರ್ಬಂಧ ಸಡಿಲಿಕೆ ಮಾಡಿ ಸಿಎಸ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.