ರಾಯಚೂರು: ಗ್ರಾಮೀಣ ಭಾಗದ ಜನ ಕೆಲಸವಿಲ್ಲದೆ ನಗರ ಪ್ರದೇಶಗಳಕಡೆ ಗುಳೆ ಹೋಗುತ್ತಿರುವುದು ರಾಯಚೂರು ಭಾಗದಲ್ಲಿ ಹೆಚ್ಚಾಗುತ್ತಿದೆ.
ಇದರಿಂದ ಮಳೆಗಾಲದಲ್ಲೂ ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಮುಂಗಾರು ಉತ್ತಮವಾಗಿದ್ದರೂ ಕೆಲಸವಿಲ್ಲ ಎಂದು ರಾಯಚೂರಿನ ವಿವಿಧ ತಾಲೂಕಿನ ಕೃಷಿ ಕೂಲಿ ಕಾರ್ಮಿಕರು ಮಳೆಗಾಲ ಚೆನ್ನಾಗಿದ್ರೂ ಮಹಾನಗರಗಳಿಗೆ ಗುಳೆ ಹೋಗುತ್ತಲೇ ಇದ್ದಾರೆ.
ಜಮೀನುಗಳಲ್ಲಿ ನಿತ್ಯ ಕೆಲಸ ಇರುವುದಿಲ್ಲ. ವಾರದಲ್ಲಿ ಮೂರು ದಿನ ಕೆಲಸ ಸಿಕ್ಕರೆ, ನಾಲ್ಕು ದಿನ ಖಾಲಿ ಕೂಡಬೇಕು. ಹೀಗಾಗಿ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಿಗೆ ಗುಳೆ ಹೋಗುತ್ತಲೇ ಇದ್ದಾರೆ. ಮಾನ್ವಿ, ದೇವದುರ್ಗ, ಮಸ್ಕಿ ಭಾಗದಿಂದ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ. ರಾಯಚೂರು ತಾಲೂಕಿನ ಕೂಲಿಕಾರರು ಕೆಲಸ ಕೊಡಿ ನಾವು ಗುಳೆ ಹೋಗಲ್ಲ ಅಂತ ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭ
ಉದ್ಯೋಗ ಖಾತ್ರಿ ಕೆಲಸ ಮಾಡೋಣವೆಂದರೆ ಕೆಲವು ಸಮಸ್ಯೆಗಳು ಇವೆ. 275 ರೂಪಾಯಿ ನಿಗದಿತ ಕೂಲಿಯಲ್ಲಿ ಕೇವಲ 200 ರೂಪಾಯಿ ಕೊಡುತ್ತಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಬಿಸಿಯೂಟ, ಮಾಸ್ಕ್ ,ಸ್ಯಾನಿಟೈಸರ್, ನೀರು, ಟೆಂಟ್ ವ್ಯವಸ್ಥೆ ಮಾಡಬೇಕು ಆದರೆ ಯಾವ ವ್ಯವಸ್ಥೆ ಮಾಡುತ್ತಿಲ್ಲ. ಕೆಲಸಕ್ಕೆ ಅರ್ಜಿಹಾಕಿ 15 ದಿನಗಳಲ್ಲಿ ಕೆಲಸ ಕೊಡಬೇಕು ಆದರೆ ಕೆಲಸ ಕೊಡುತ್ತಿಲ್ಲ. ಅರ್ಜಿಹಾಕಿದವರಲ್ಲಿ ಕೆಲವರಿಗೆ ಮಾತ್ರ ಕೆಲಸ ಕೊಡುತ್ತಿದ್ದಾರೆ ಅವರಿಗೂ ಸರಿಯಾಗಿ ಕೂಲಿ ಕೊಡುತ್ತಿಲ್ಲ ಅಂತ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಆರೋಪಿಸಿದ್ದಾರೆ.
ಮಳೆ ಚೆನ್ನಾಗಿದ್ದು, ಉತ್ತಮ ಬೆಳೆ ನಿರೀಕ್ಷೆಯಿದ್ದರೂ ಜನರ ಗುಳೆ ನಿಂತಿಲ್ಲ. ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಲಿಕಾರರಿಗೆ ಉದ್ಯೋಗ ನೀಡಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.