ಮೈಸೂರು: ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಜೆಡಿಎಸ್ ಗೆ ಸಿಕ್ಕಿದ್ದು ಬಯಸದೇ ಬಂದ ಭಾಗ್ಯ ಎಂದು ಖುದ್ದು ಮಾಜಿ ಸಚಿವ ಸಾರಾ ಮಹೇಶ್ ಒಪ್ಪಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್, ಸುಮ್ನೆ ನಾಮಪತ್ರ ಸಲ್ಲಿಸಿ. ನೀವೇನೂ ಗೆಲ್ಲೋಕೆ ಆಗಲ್ಲ ಅಂತಾ ನಮ್ಮ ಮೇಯರ್ ಅಭ್ಯರ್ಥಿಗೆ ಹೇಳಿದ್ದೆವು. ನೋಡಿದ್ರೆ ಕಾಂಗ್ರೆಸ್ನವರು ಕ್ಷಣಾರ್ಧದಲ್ಲಿ ನಮ್ಮ ಅಭ್ಯರ್ಥಿ ಬೆಂಬಲಿಸಿ ಬಿಟ್ಟರು ಎಂದು ಪ್ರತಿಕ್ರಿಯಿಸಿದರು.
ನಮಗೆ ಮೇಯರ್ ಸ್ಥಾನ ಸಿಗುತ್ತೆ ಅಂತಾ ನಾವು ಮಧ್ಯಾಹ್ನ 12 ಗಂಟೆಯವರೆಗೂ ಅಂದುಕೊಂಡಿರಲಿಲ್ಲ. ಬಿಜೆಪಿಗೆ ಮೇಯರ್ ಸ್ಥಾನ ಸಿಗಬಹುದು ಎಂದು ಊಹಿಸಿದ್ದೆವು. ನಮಗೆ 22 ಮತ ಬರಬಹುದು ಅಂದುಕೊಂಡಿದ್ದೆವು. ಅದರಲ್ಲೂ ಇಬ್ಬರು ನಮ್ಮ ಶಾಸಕರು ಗೈರಾದ ಮೇಲೆ ಆ ಮತ ಇನ್ನೂ ಕಡಿಮೆ ಆಗಲಿದೆ ಅಂದುಕೊಂಡಿದ್ದೆವು. ಆದರೆ ಕಾಂಗ್ರೆಸ್ನವರು ದಿಢೀರ್ ನಮ್ಮ ಬೆಂಬಲಿಸಿ ಬಿಟ್ಟರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಅಭಿಪ್ರಾಯಪಟ್ಟರು.