ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯ ಕಾಟಕ್ಕೆ ಬೇಸತ್ತು ಗೃಹಿಣಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹನುಮಂತಿ(29), 14 ತಿಂಗಳ ಮಗು ಉದಯಯ್ ಸಾವನ್ನಪ್ಪಿರುವ ದುರ್ದೈವಿಗಳು. ಗ್ರಾಮದ ಹೊರವಲಯದ ಬಾವಿಯಲ್ಲಿ ಶವಗಳು ಪತ್ತೆಯಾಗಿವೆ.
ಫೆಬ್ರವರಿ 20 ರಂದು ಮನೆಯಿಂದ ಹೊರಹೋಗಿದ್ದ ಗೃಹಿಣಿ ಹಾಗೂ ಮಗು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಗಂಡ ಹುಲಿಗೆಯ್ಯ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಅಲ್ಲದೆ ಅತ್ತೆ, ಮಾವನ ಬೆಂಬಲವೂ ಇರಲಿಲ್ಲ. ಇದರಿಂದ ಹನುಮಂತಿ ಬೇಸತ್ತು ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಅಂತ ಮೃತಳ ಕಡೆಯವರು ಆರೋಪಿಸಿದ್ದಾರೆ. ಮದುವೆಯಾಗಿ 7 ವರ್ಷವಾಗಿದ್ದು ದಂಪತಿಗೆ ಎರಡು ಮಕ್ಕಳಿದ್ದರು.
ಮೃತರ ಶವಗಳನ್ನು ಗ್ರಾಮಸ್ಥರ ಸಹಾಯದೊಂದಿಗೆ ಪೊಲೀಸರು ಹೊರತೆಗೆದಿದ್ದಾರೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಳ ಗಂಡ, ಅತ್ತೆ, ಮಾವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.