ಬೆಂಗಳೂರು: ಸರ್ಕಾರ ಕೊರೊನಾ ವಾರಿಯರ್ಸ್ ಗೆ ಟೆಸ್ಟಿಂಗ್ ಟಾರ್ಗೆಟ್ ನೀಡುತ್ತಿದ್ದು, ಸರ್ಕಾರದ ಈ ಕಿರಿಕ್ನಿಂದ ಆರೋಗ್ಯಾಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೈಸೂರು ವೈದ್ಯಾಧಿಕಾರಿ ನಾಗೇಂದ್ರ ಸಾವು ಬೆನ್ನಲ್ಲೆ ಕೊರೊನಾ ವಾರಿಯರ್ಸ್ ಗೆ ಸರ್ಕಾರದ ಇಲಾಖೆಯಿಂದ ಟಾರ್ಗೆಟ್ ಟಾರ್ಚರ್ ಬಿಚ್ಚಿಕೊಳ್ಳುತ್ತಿದೆ. ಹಿರಿಯ ಅಧಿಕಾರಿಗಳು ನೀಡುತ್ತಿರುವ ಟಾರ್ಚರ್ ಕಥೆಯನ್ನು ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದಾವೆ. ಅದರಲ್ಲಿ ಪ್ರತಿ ಕೇಂದ್ರಗಳಿಗೆ 250 ಜನರನ್ನು ಟೆಸ್ಟ್ ಮಾಡಬೇಕು ಎಂದು ಆರಂಭದಲ್ಲಿ ಟಾರ್ಗೆಟ್ ನೀಡಲಾಗಿತ್ತು, ಈಗ ಅದು 500ಕ್ಕೆ ಏರಿಕೆಯಾಗಿದೆಯಂತೆ. ಅದರಲ್ಲಿ 300 ಅಂತೂ ನಿತ್ಯವೂ ಆಗಲೇಬೇಕು ಎಂದು ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರನ್ನು ಟೆಸ್ಟ್ ಮಾಡಬಹುದು. ಆದರೆ ಗುಣಲಕ್ಷಣಗಳು ಇಲ್ಲದೇ ಇರುವ ಜನರನ್ನು ಟೆಸ್ಟ್ ಮಾಡಿ ಅಂದರೆ ಎಲ್ಲಿ ಬರುತ್ತಾರೆ ಎಂದು ಸಿಬ್ಬಂದಿ ದೂರಿದ್ದಾರೆ.
ಟಾರ್ಗೆಟ್ ರೀಚ್ ಆಗದೇ ಇದ್ದರೆ ತಲೆದಂಡ ಫಿಕ್ಸ್. ಈಗಾಗಲೇ ಅನೇಕ ಅಧಿಕಾರಿಗಳು ಕೊರೊನಾ ಟೆಸ್ಟಿಂಗ್ ಆಗದೇ ಇದ್ದಿದ್ದಕ್ಕೆ ಕೆಲಸವನ್ನು ಕಳಕೊಂಡಿದ್ದಾರಂತೆ. ಕ್ಯಾಂಪ್ಗಳನ್ನು ಮಾಡಿ ಸುಖಾಸುಮ್ಮನೆ ಜನರನ್ನು ಟೆಸ್ಟ್ ಮಾಡಿ ಟಾರ್ಗೆಟ್ ರೀಚ್ ಮಾಡುತ್ತಿದ್ದೇವೆ. ಈಗ ಬೆಂಗಳೂರಿನಲ್ಲಿ ಕ್ಯಾಂಪ್ಗಳನ್ನು ಮಾಡಿ ಆಟೋ ಡ್ರೈವರ್ಸ್ ತರಕಾರಿ ವ್ಯಾಪಾರಿಗಳನ್ನು ರೋಗದ ಲಕ್ಷಣ ಇಲ್ಲದೆ ಇದ್ದರೂ ಕರೆದು ಟೆಸ್ಟಿಂಗ್ ಮಾಡುತ್ತಿದ್ದೇವೆ. ಒಂದಿನಾನೂ ರಜೆಯೇ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಬ್ ಟೆಕ್ನಿಷನ್ಸ್ ಗಳಿಗಷ್ಟೇ ವೈಜ್ಞಾನಿಕವಾಗಿ ಸ್ವಾಬ್ ಕಲೆಕ್ಷನ್ ಗೊತ್ತಿರುತ್ತೆ. ಆದರೆ ಈಗ ಸರ್ಕಾರ ಸಿಕ್ಕ ಸಿಕ್ಕವರಿಗೆ ಟ್ರೈನಿಂಗ್ ಕೊಟ್ಟು ಸ್ವಾಬ್ ಕಲೆಕ್ಷನ್ ಮಾಡಿ ಎಂದು ಕಳಿಸುತ್ತಿದ್ದಾರೆ. ಇದರಿಂದ ಪರಿಣಿತರಲ್ಲದವರು ಮೂಗಿನ ದ್ರಾವಣ ತೆಗೆಯುವಾಗ ಅನೇಕರಿಗೆ ರಕ್ತ ಬಂದಿದೆ. ಲ್ಯಾಬ್ ಟೆಕ್ನಿಷನ್ಸ್ ಕೊರತೆ ಇದ್ದರೂ ಸರ್ಕಾರದ ಟಾರ್ಚರ್ ನಿಂದ ಇಲಾಖೆಯ ಕಿರಿಕ್ನಿಂದ ಇಂತವರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಧಿಕಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.