ತಿರುವನಂತಪುರ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಸಂಭವಿಸದ ಸಂಘರ್ಷದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ(ಆರ್ಎಸ್ಎಸ್) ಕಾರ್ಯಕರ್ತ ಮೃತಪಟ್ಟಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐನ) 6 ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತಪಟ್ಟ ಯುವಕ ನಂದು(23) ಎಂದು ಗುರುತಿಸಲಾಗಿದ್ದು, ಆಲಪ್ಪುಳದಲ್ಲಿರುವ ವಯಾಲಾರ್ ಪಟ್ಟಣದ ಸಮೀಪ ಎಸ್ಡಿಪಿಐ ಕಾರ್ಯಕರ್ತರು ಆರ್ಎಸ್ಎಸ್ ವ್ಯಕ್ತಿಯೊಂದಿಗೆ ಜಗಳ ಮಾಡಿದ್ದಾರೆ. ಈ ವೇಳೆ ಮಾರಕಾಸ್ತ್ರಗಳಿಂದ ನಂದು ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ನಂದುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸುಮಾರು ಆರು ಮಂದಿಎಸ್ಡಿಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರನ್ನು ಕೂಡ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯನ್ನು ಖಂಡಿಸಿ ಗುರುವಾರ ಆಲಪ್ಪುಳ ಜಿಲ್ಲೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಘೋಷಿಸಿತ್ತು. ಇದೀಗ ಇಂದು ಮುಂಜಾನೆಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆಸಲಾಗುತ್ತಿದೆ.
ಬಿಜೆಪಿಯ ವಿಜಯ್ ಯಾತ್ರೆಯನ್ನು ಕಾಸರಗೂಡಿನಿಂದ ತಿರುವನಂತಪುರಂವರೆಗೂ ಉದ್ಘಾಟಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ವಿರೋಧಿಸಿ ಎಸ್ಡಿಪಿಐ ಇತ್ತೀಚೆಗೆ ರ್ಯಾಲಿ ನಡೆಸಿತ್ತು. ಬಳಿಕ ಈ ಘಟನೆ ಸಂಭವಿಸಿದೆ.