ಮಂಡ್ಯ/ಮೈಸೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ಮಧ್ಯೆ ಹಲವೆಡೆ ಧಾರಾಕಾರ ಮಳೆ ಆಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತ್ತ ಕೆಆರ್ಎಸ್ ಮತ್ತು ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂ ಒಳ ಹರಿವಿನಲ್ಲಿ ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ 6,324 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು 8,972 ಕ್ಯೂಸೆಕ್ಗೆ ಏರಿಕೆಯಾಗಿದೆ. ಅಣೆಕಟ್ಟೆಯಲ್ಲಿ ಒಳ ಹರಿವು ಹೆಚ್ಚಾಗಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
- Advertisement 2
- Advertisement 3
ಅಣೆಕಟ್ಟೆಯ ನೀರಿನ ಮಟ್ಟ 100.33 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿ 18 ಅಡಿ ನೀರು ಹೆಚ್ಚಾಗಿದೆ. ಕೆಆರ್ಎಸ್ ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ 100.33 ಅಡಿ ಆಗಿದೆ. ಅಣೆಕಟ್ಟೆ ಒಳಹರಿವು 8,972 ಕ್ಯೂಸೆಕ್ ಆಗಿದ್ದು, ಹೊರ ಹರಿವು 458 ಕ್ಯೂಸೆಕ್ ಆಗಿದೆ. ಸದ್ಯ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು 23.071 ಟಿಎಂಸಿ ಆಗಿದೆ.
- Advertisement 4
ಇತ್ತ ಕೇರಳ ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯದ ಒಳಹರಿವು 10 ಸಾವಿರ ಕ್ಯೂಸೆಕ್ಗೆ ದಾಟಿದೆ. ಜಲಾಶಯದ ಇಂದಿನ ಒಳಹರಿವು 11,324 ಕ್ಯೂಸೆಕ್ ಆಗಿದ್ದು, ಜಲಾಶಯದ ಇಂದಿನ ಹೊರಹರಿವು 1,500 ಕ್ಯೂಸೆಕ್ ಆಗಿದೆ.
ಇನ್ನೂ ಜಲಾಶಯದ ಗರಿಷ್ಠ ನೀರಿನ ಮಟ್ಟ 2,284 ಅಡಿ ಆಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 2,267.88 ಅಡಿ ಆಗಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.50 ಟಿಎಂಸಿ ಆಗಿದೆ. ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 10.67 ಟಿಎಂಸಿ ಆಗಿದೆ.