ಬೆಂಗಳೂರು: ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸುಲಭ್ ಶೌಚಾಲಯ ಯೋಜನೆಗೆ ಮೋದಿಯ ಹೆಸರನ್ನು ಇಡಲಿ: ಹರಿಪ್ರಸಾದ್ ವ್ಯಂಗ್ಯ
ನೆಹರು, ಇಂದಿರಾ ಗಾಂಧಿಯವರ ಒಳ್ಳೆಯ ಕೊಡುಗೆಗಳನ್ನು ನೆನೆಯುತ್ತೇವೆ. ಆದರೆ ಅವರು ಮಾಡಿದ್ದ ಎಲ್ಲವನ್ನೂ ಒಪ್ಪಿಕೊಳುವುದ್ದಕ್ಕೆ ನಾವೇನು ಗುಲಾಮರಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.
ನಮ್ಮ ರಾಜಕೀಯ ವಿರೋಧಿಗಳು ಹಳೆಯ ಗ್ರಾಮಾಫೋನ್ ಪ್ಲೇಟ್ ತಿರುಗಿಸುತ್ತಲೇ ಇರುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಒಬ್ಬರು. ಸಿದ್ದರಾಮಯ್ಯನವರು ಅಪ್ ಡೇಟ್ ಆಗಬೇಕು. ನಾವು ಅಂಬೇಡ್ಕರ್ ವಿರೋಧಿಗಳಲ್ಲ. ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್. ನಿಮ್ಮ ಸಾಫ್ಟ್ ವೇರ್ ಅಪ್ಡೇಟ್ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಸಂಸತ್ತಿನಲ್ಲಿ ಕಾಂಗ್ರೆಸ್ ವಿಪಕ್ಷಗಳ ಅಸಹಾಕಾರದ ನಡುವೆಯೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. 671 ಒಬಿಸಿ ಸಮುದಾಯಗಳು ನ್ಯಾಯ ಪಡೆಯಲು ಸಾಧ್ಯವಾಗಲಿದೆ. ಮೀಸಲಾತಿ, ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆಯಾಗಿದ್ದು, ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ. ಸಂಸತ್ತನ್ನು ಖಾನ್ ಮಾರ್ಕೆಟ್ ಆಗಿ ಪರಿವರ್ತಿಸಿದ್ದವರು ಕಾಂಗ್ರೆಸ್ನವರು ಎಂದು ದೂರಿದರು.