– ಮಗಳ ಸಾವಿಗೆ ತಂದೆ ಪ್ರತಿಕಾರ
ರಾಂಚಿ: ತಂದೆಯೊಬ್ಬ ತನ್ನ ಮಗಳ ಮಾಜಿ ಪ್ರಿಯಕರನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಜಾರ್ಖಂಡ್ನ ಪಾಲಮು ಜಿಲ್ಲೆಯ ವೀರೇಂದ್ರ ಭೂಯಾ (23) ಕೊಲೆಯಾದ ಮಾಜಿ ಪ್ರಿಯಕರ. ಯುವಕನನ್ನು ಕಲ್ಲಿನಿಂದ ಕೊಲೆಗೈದ ವ್ಯಕ್ತಿಯನ್ನು ಆತನ ಮಾಜಿ ಗೆಳತಿಯ ತಂದೆ ಮಂಗರ್ ಯಾದವ್ ಎಂದು ಗುರುತಿಸಲಾಗಿದೆ. ಪಾಲಮು ಜಿಲ್ಲೆಯ ಪಂಕಿ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಪ್ರಕರಣ?:
ವೀರೇಂದ್ರ ಭೂಯಾ ಮಾಜಿ ಗೆಳತಿ ಈಗಾಗಲೇ ಮೃತಪಟ್ಟಿದ್ದಾಳೆ. ಹೀಗಾಗಿ ವೀರೇಂದ್ರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಯುವತಿಯ ತಂದೆ ಮಂಗರ್ ಯಾದವ್ ಮುಂದಾಗಿದ್ದ. ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ವೀರೇಂದ್ರ ತನ್ನ ಗ್ರಾಮದವನೇ ಆಗಿದ್ದ ಮಂಗರ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದ. ಅದಾದ ಸ್ವಲ್ಪ ಹೊತ್ತಿನಲ್ಲಿ ವೀರೇಂದ್ರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಕುಟುಂಬವು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ವೀರೇಂದ್ರ ಕುಟುಂಬಸ್ಥರು ಶನಿವಾರ ಪಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ವೀರೇಂದ್ರ ಕೊನೆಯದಾಗಿ ಮಂಗರ್ ಯಾದವ್ ಜೊತೆಗೆ ಜಗಳ ಮಾಡಿಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಆರೋಪಿ, ‘ವೀರೇಂದ್ರ ನನ್ನ ಮಗಳ ಸಾವಿಗೆ ಕಾರಣನಾಗಿದ್ದ. ಹೀಗಾಗಿ ಆತನನ್ನು ಹತ್ಯೆ ಮಾಡಿದ್ದೇನೆ’ ಎಂದು ಕೃತ್ಯ ಒಪ್ಪಿಕೊಂಡಿದ್ದಾನೆ.