ಬೆಂಗಳೂರು: ಕರ್ನಾಟಕದ ಸಿನಿಮಾ ಪ್ರಿಯರಿಗೆ ನಿರಾಸೆಯ ಸುದ್ದಿ ಪ್ರಕಟವಾಗಿದೆ. ಕೋವಿಡ್ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಮಾತ್ರ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಮೂರು ದಿನಗಳ ಹಿಂದೆ ಕೇಂದ್ರ ಗೃಹಸಚಿವಾಲಯ ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸಮ್ಮತಿ ನೀಡಿ ಕೋವಿಡ್ 19 ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಹೀಗಿದ್ದರೂ ಪ್ರಕಟಿಸಲಾದ ಮಾರ್ಗಸೂಚಿ ಹೊರತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿತ್ತು.
ರಾಜ್ಯ ಸರ್ಕಾರಗಳಿಗೆ ಅಧಿಕಾರ ಸಿಕ್ಕಿದ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಶೇ.50 ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿ ಕರ್ನಾಟಕ ಸರ್ಕಾರ ಇಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಹೊಸ ಮಾರ್ಗಸೂಚಿ ಫೆ.28ರ ವರೆಗೆ ಅನ್ವಯವಾಗಲಿದೆ.
ಕೈಗಾರಿಕಾ ಪ್ರದೇಶ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಹಾಜರಾಗಬಹುದು. ಮದುವೆ, ಮರಣ ಇತ್ಯಾದಿ ಸಮಾರಂಭಗಳಿಗೆ ಗರಿಷ್ಟ 500 ಜನ ಸೇರಲು ಸರ್ಕಾರ ಅನುಮತಿ ನೀಡಿದೆ.
ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಫೆ.5 ರಂದು, ನಟ ಧ್ರುವ ಸರ್ಜಾ ಅಭಿನಯದ ನಾಲ್ಕು ಭಾಷೆಯಲ್ಲಿ ಬರಲಿರುವ ಪೊಗರು ಚಿತ್ರ ಫೆ.19ರಂದು ಬಿಡುಗಡೆಯಾಗಲಿದೆ.