ತುಮಕೂರು: ನಗರದ ಹೊರವಲಯದಲ್ಲಿರುವ ದೇವರಾಯನದುರ್ಗ ರಸ್ತೆಯ ಬಳಿ ಕರಡಿಯೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ದೇವರಾಯನದುರ್ಗ ರಸ್ತೆಯ ಕೆಂಪೇಗೌಡ ಕಾಲೇಜಿನ ಸಮೀಪ ಕರಡಿ ಕಂಡುಬಂದಿದೆ. ಶುಕ್ರವಾರ ಸಂಜೆ ಸುಮಾರು 5 ಗಂಟೆ ಮತ್ತು ಇವತ್ತು ಬೆಳಗಿನ ಜಾವ ಒಂದೇ ಜಾಗದಲ್ಲಿ ಎರಡು ಬಾರಿ ಕರಡಿ ಪ್ರತ್ಯಕ್ಷಗೊಂಡಿದೆ. ಕಾಲೇಜಿನ ಸಮೀಪ ಬೆಟ್ಟದ ತಪ್ಪಲಿನಲ್ಲಿ ಎರಡು ಕರಡಿಗಳು ಒಟ್ಟಿಗೆ ವಿಹರಿಸುತಿದ್ದವು.
ತುಮಕೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡುತ್ತಿತ್ತು. ಇದೀಗ ಕರಡಿ ಕಾಲೇಜಿನ ಸಮೀಪವೇ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಭಯವನ್ನು ಹೆಚ್ಚು ಮಾಡಿದೆ.
ಈ ನಡುವೆ ಕರಡಿ ಯಾರ ಮೇಲೆಯೂ ದಾಳಿ ಮಾಡಿದ್ದ ಬಗ್ಗೆ ವರದಿ ಆಗಿಲ್ಲ. ಆದರೆ ಅರಣ್ಯ ಪ್ರದೇಶ ಸಮೀಪವಿರುವುದರಿಂದ ಗುಡ್ಡಗಾಡು ಆಯಕಟ್ಟಿನ ಸ್ಥಳವಾಗಿರುವುದರಿಂದ ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.