ಬೆಂಗಳೂರು: 13ನೇ ಆವೃತ್ತಿಯ ಏರೋ ಇಂಡಿಯಾ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕಳೆದ ವರ್ಷ ನಡೆದ ಅಗ್ನಿ ಅವಘಡದಿಂದ ಎಚ್ಚೆತ್ತ ಭಾರತೀಯ ರಕ್ಷಣಾಲಯ ಈ ಸಲ ಭಾರೀ ಭದ್ರತೆಯನ್ನು ಮಾಡಿಕೊಂಡಿದೆ.
ಕಳೆದ ಬಾರಿ ಪ್ರದರ್ಶನ ತಾಲೀಮು ವೇಳೆ ಸೂರ್ಯ ಕಿರಣ್ ವಿಮಾನ ದುರಂತ ಹಾಗೂ ವಾಹನ ನಿಲುಗಡೆ ಸ್ಥಳದಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಹಿನ್ನೆಲೆ, ಫುಲ್ ಅಲರ್ಟ್ ಮಾಡಿಕೊಳ್ಳಲಾಗಿದೆ. ಏರ್ ಶೋ ನಡೆಯುವ ಸ್ಥಳ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನ ಮಾಡಿಕೊಂಡಿದೆ.
ವೈಮಾನಿಕ ಪ್ರದರ್ಶನ ನಡೆಯುವ ಆವರಣ ಮಾತ್ರವಲ್ಲದೇ ಅದರ ಸುತ್ತಮುತ್ತಲಿನ 45 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ. ಯಾವುದೇ ಅವಘಢಗಳು ನಡೆಯದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರದಿಂದ ನಯಾ ಕಾರ್ಯತಂತ್ರವನ್ನ ಮಾಡಿಕೊಂಡಿದೆ.
ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ನಕ್ಷೆ ಸಿದ್ಧಪಡಿಸಿ ಭದ್ರತೆಯನ್ನ ರಾಜ್ಯ ವಿಪತ್ತು ನಿರ್ವಾಹಣಾ ಪ್ರಾಧಿಕಾರ ಪರಿಶೀಲಿಸಲಿದೆ. 45 ಚದರ ಕಿ.ಮೀ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಆಕಸ್ಮಿಕ ಅನಾಹುತಗಳು ಸಂಭವಿಸಿದ್ರೆ ತಕ್ಷಣ ಕಾರ್ಯಪ್ರವೃತ್ತರಾಗಿ ಘಟನಾ ಸ್ಥಳ ತಲುಪಿ ಹಾನಿ ಪ್ರಮಾಣ ಕಡಿಮೆ ಮಾಡಲು 45 ಚದರ ಕಿ.ಮೀ ವ್ಯಾಪ್ತಿಯನ್ನು ಗ್ರೀಡ್, ಸಬ್ ಗ್ರೀಡ್, ಮೈಕ್ರೋಗ್ರೀಡ್ ಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ಪ್ರತಿ ಗ್ರೀಡ್ 5 ಚದರ ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.
ಗ್ರೀಡ್ ಗಳನ್ನ 1 ಚ.ಕಿ.ಮೀಟರ್ ಸಬ್ ಗ್ರೀಡ್ ಗಳಾಗಿ ವಿಭಜನೆ, ಸಬ್ ಗ್ರೀಡ್ ಗಳನ್ನ ತಲಾ 100 ಚದರ ಮೀ ಮೈಕ್ರೋ ಗ್ರೀಡ್ ಗಳಾಗಿ ಬೇರ್ಪಡಿಸಲಾಗಿದೆ. ಪ್ರತಿ ಗ್ರೀಡ್ ಗೂ 1,2,3 ಸಂಖ್ಯೆ ನೀಡಿ ಗುರ್ತಿಸಲಾಗಿದ್ದು, ವೈಮಾನಿಕ ಪ್ರದರ್ಶನದ ವ್ಯಾಪ್ತಿಯ ಒಳಾಂಗಣದ ವಿಪತ್ತು ನಿರ್ವಾಹಣೆಗೆ ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿಗಳು ಕಮಾಂಡಿಂಗ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಹೊರಾಂಗಣ ವಿಪತ್ತು ನಿರ್ವಾಹಣೆಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಕಮಾಂಡಿಂಗ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಸಹಾಯಕ ಕಮಾಂಡಿಂಗ್ ಅಧಿಕಾರಿಗಳನ್ನಾಗಿ ಸಂಚಾರಿ ಪೊಲೀಸ್, ಬಿಬಿಎಂಪಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿ ಶಾಮಕದಳ, ಪೊಲೀಸ್ ಹಾಗೂ ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇಮಕವಾಗಿದೆ. ಜಲಮಂಡಳಿ, ಲೋಕೋಪಯೋಗಿ, ಬೆಸ್ಕಾಂ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ತರಬೇತಿಯನ್ನ ನೀಡಲಾಗ್ತಿದೆ. ಆಕಸ್ಮಿಕ ಅನಾಹುತಗಳ ಬಗ್ಗೆ ನಿಗಾ, ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲು ರಾಜ್ಯ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ಇಂಟಿಗ್ರೇಟೆಡ್ ಕಮಾಂಡಿಂಗ್ ಆಂಡ್ ಕಂಟ್ರೋಲ್ ಕೊಠಡಿ ಸ್ಥಾಪನೆ ಮಾಡಲಾಗಿದೆ.