– ಇಷ್ಟು ಕೊಲೆಗಳಾದ್ರೂ ಶೋಭಾ ಕರಂದ್ಲಾಜೆ ಎಲ್ಲಿ?
ಉಡುಪಿ: ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಬಿಜೆಪಿ ಉಡುಪಿಯಲ್ಲಿ ಹತ್ಯಾ ರಾಜಕಾರಣ ಮಾಡುತ್ತಿದೆ. ಜಿಲ್ಲೆಯಲ್ಲಿ ವಿಚ್ಛಿದ್ರಕಾರಿ ದುರ್ಘಟನೆಗಳು ಹೆಚ್ಚಾಗಿದೆ ಎಂದು ಮಾಜಿ ಸಚಿವ ವಿಜಯಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ಮರ್ಡರ್ ಪಾಲಿಟಿಕ್ಸ್ ಗೆ ಎಡಮೊಗೆ ಕೊಲೆ ಪ್ರಕರಣ ಇದಕ್ಕೆ ಸಾಕ್ಷಿ. ಬಿಜೆಪಿ ಕಾರ್ಯಕರ್ತರನ್ನು ಅವರ ಪಕ್ಷದವರೇ ಕೊಲೆ ಮಾಡುತ್ತಿದ್ದಾರೆ. ಪಂಚಾಯತ್ ನಿಂದ ಆಗುತ್ತಿದ್ದ ತೊಂದರೆಗಳ, ಅಕ್ರಮಗಳ ಬಗ್ಗೆ ಟೀಕಿಸಿದ್ದಕ್ಕೆ ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿದ್ದಾರೆ. ಈಗಾಗಲೇ ನಾಲ್ಕು ಮಂದಿ ಬಂಧನವಾಗಿದ್ದು, ಇನ್ನಷ್ಟು ಮಂದಿ ಭಾಗಿಯಾದವರಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೇಲೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರು ಕೊಲೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು.
ಕಾಂಗ್ರೆಸ್ ಕೊಲೆಗಳಿಗೆ ಬೆಂಬಲ ಕೊಡುತ್ತಾರೆ ಎಂದು ಪ್ರಚಾರ ಮಾಡಿದರು. ಜಿಲ್ಲೆಯಲ್ಲಿ ಮೂರು ಘಟನೆಯನ್ನು ಮೆಲುಕು ಹಾಕಬೇಕು. ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಕೋಟ ಅವಳಿ ಕೊಲೆ ಪ್ರಕರಣ , ಎಡಮೊಗೆ ಕೊಲೆ ಪ್ರಕರಣ. ಕೊಲೆ ಮಾಡಿದ ಎಲ್ಲಾ ಆರೋಪಿಗಳು ಬಿಜೆಪಿಗೆ ಸೇರಿದವರು. ಎಡಮೊಗೆ ಪ್ರಕರಣದಲ್ಲಿ ಬಿಜೆಪಿ ಪಂಚಾಯತ್ ಅಧ್ಯಕ್ಷನೇ ಮೊದಲ ಆರೋಪಿ. ಸಣ್ಣಪುಟ್ಟ ಘಟನೆಯಾದರೂ ಶೋಭಾ ಕರಂದ್ಲಾಜೆ ದೊಡ್ಡದಾಗಿ ಬಿಂಬಿಸುತ್ತಾರೆ. ರಾಜಕೀಯ ಲಾಭ ಪಡೆಯಲು ಹವಣಿಸುತ್ತಾರೆ. ಇಷ್ಟು ಕೊಲೆಗಳಾದಾಗ ಸಂಸದೆ ಶೋಭಾ ಎಲ್ಲಿದ್ದಾರೆ. ಶೋಭಾ- ಬಿ.ವೈ ರಾಘವೇಂದ್ರ ಸಂತ್ರಸ್ತರ ಮನೆಗೆ ಯಾಕೆ ಭೇಟಿ ಕೊಟ್ಟಿಲ್ಲ. ರಾಜಕೀಯ ಹಸ್ತಕ್ಷೇಪವಿಲ್ಲದ ಆರೋಪಿಗಳಿಗೆ ಶಿಕ್ಷೆಯಾಗಲಿ. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಧ್ಯಕ್ಷ ಪಂಚಾಯತ್ ಕಚೇರಿಯಲ್ಲಿ ಕುಳಿತುಕೊಳ್ಳಬಾರದು. ಕೊಲೆಗೈದ ಆತನನ್ನು ಶಾಶ್ವತವಾಗಿ ಜೈಲಿಗಟ್ಟಬೇಕು ಎಂದು ಸೊರಕೆ ಹೇಳಿದ್ದಾರೆ.