ಕಾರವಾರ: ಅಪ್ರಾಪ್ತ ಬಾಲಕ ಸೇರಿ ಅಂತರ್ ಜಿಲ್ಲಾ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಇಂದು ನಡೆದಿದೆ.
ಧಾರವಾಡ ಜಿಲ್ಲೆಯ ಲಕ್ಷ್ಮೀಸಿಂಗನಕೇರಿ ಮೂಲದ ಹುಲಗಪ್ಪ ಹುಲಗೇಶ ಬಂಡಿವಡ್ಡರ (32) ಹಾಗೂ ಇನ್ನೊಬ್ಬ ಅಪ್ರಾಪ್ತನ ಬಂಧನ ಮಾಡಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತರಿಂದ ಸುಮಾರು 2.20 ಲಕ್ಷ ರೂ. ಮೌಲ್ಯದ 42 ಗ್ರಾಂ. ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ.
2020ರ ಡಿಸೆಂಬರ್ ನಲ್ಲಿ ಯಲ್ಲಾಪುರದ ಶಾರದಾ ನಗರದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳು, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ, ಭಟ್ಕಳ, ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ಸೊರಬ, ಆನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿಗಳಲ್ಲಿ ಮನೆ, ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಯಲ್ಲಾಪುರದ ಸಿಪಿಐ ಸುರೇಶ್ ಯಳ್ಳೂರ ನೇತೃತ್ವದಲ್ಲಿ ಪಿಎಸ್ ಐಗಳಾದ ಮಂಜುನಾಥ ಗೌಡರ, ಮುಷಾಹಿದ್ ಅಹ್ಮದ್ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ.