– ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶವಿಲ್ಲ
ಮಡಿಕೇರಿ: ಕೊರೊನಾ ಮಾಹಾಮಾರಿಯಿಂದ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದು, ಅದರ ಪರಿಣಾಮ ದೇವಾಲಯಗಳಿಗೂ ತಟ್ಟಿತ್ತು. ಇದೀಗ ಎರಡೂವರೆ ತಿಂಗಳ ಬಳಿಕ ದೇವಾಲಯಗಳನ್ನು ತೆರೆಯಲಾಗುತ್ತಿದ್ದು, ಸೋಮವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಹೀಗಾಗಿ ಕೊಡಗಿನ ಪ್ರಸಿದ್ಧ ದೇವಾಲಯಗಳಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.
ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದಕ್ಕೆ ಪ್ರತೀ ಮೂರು ಅಡಿಗೆ ಒಂದು ಮಾರ್ಕ್ ಮಾಡಲಾಗಿದೆ. ಅಲ್ಲದೆ ಓಂಕಾರೇಶ್ವರ ದೇವಾಲಯಕ್ಕೆ ಬರಬೇಕಾದರೆ, ಮುಂಭಾಗದಲ್ಲಿರುವ ಆಂಜನೇಯ ದೇವಾಲಯದ ಬಳಿಯಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಮಾಸ್ಕ್ ಹಾಕಿರುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಸ್ಯಾನಿಟೈಸರ್ ಕೊಡಲಾಗುತ್ತಿದೆ. ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರಿಗೆ ಪ್ರವೇಶ ಅವಕಾಶವನ್ನು ನಿರಾಕರಿಸಲಾಗಿದೆ.
ಈ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳ ಮೂಲಕ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತಿದ್ದು, ದರ್ಶನ ಮಾತ್ರ ದೊರೆಯಲಿದೆ. ಆದರೆ ಯಾವುದೇ ತೀರ್ಥ ಪ್ರಸಾದ, ಕುಂಕುಮ ವಿತರಣೆ ಇರುವುದಿಲ್ಲ ಎಂದು ದೇವಾಲಯದ ಅರ್ಚಕರು ಸ್ಪಷ್ಟಪಡಿಸಿದ್ದಾರೆ.
ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶವಿಲ್ಲ
ತಲಕಾವೇರಿ-ಭಾಗಮಂಡಲ ದೇವಾಲಯಗಳೂ ಭಕ್ತರ ದರ್ಶನಕ್ಕೆ ಮುಕ್ತವಾಗುತ್ತಿದೆ. ಆದರೆ ಪೂಜಾ ಸೇವೆಗಳು ದೇವಾಲಯಗಳಲ್ಲಿ ಇರುವುದಿಲ್ಲ. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ, ಕೇಶಮುಂಡನ ಸೇರಿದಂತೆ ಯಾವುದೇ ಧಾರ್ಮಿಕ ಪದ್ಧತಿಗಳಿಗೆ ಅವಕಾಶವಿಲ್ಲ. ಆರತಿ, ತೀರ್ಥ, ಪ್ರಸಾದ ಕೂಡ ಇರುವುದಿಲ್ಲ. ರಾಜ್ಯ ಮುಜರಾಯಿ ಇಲಾಖೆಯ ನಿರ್ದೇಶನಗಳನ್ನು ತಲಕಾವೇರಿ ಭಾಗಮಂಡಲದಲ್ಲಿಯೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.