ಚಿಕ್ಕಬಳ್ಳಾಪುರ: ಜಾಸ್ತಿ ಮೊಬೈಲ್ ನೋಡಬೇಡ. ರಾತ್ರಿ 11 ಗಂಟೆಯಾದರೂ ಮೊಬೈಲ್ ನೋಡಿಕೊಂಡೇ ಇರುತ್ತೀಯಾ, ಬೆಳಗ್ಗೆ 11 ಗಂಟೆಯಾದರೂ ಎದ್ದೇಳಲ್ಲ. ಹಾಗಾಗಿ ಮೊಬೈಲ್ ಮುಟ್ಟಬೇಡ ಅಂತ ತಂದೆ, ತಾಯಿ ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹೊರವಲಯದ ತಳಗವಾರ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದ ನರಸಪ್ಪ ಹಾಗೂ ಜಯಲಕ್ಷ್ಮಮ್ಮನವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದ. ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ನರಸಪ್ಪ ಮತ್ತು ಕೂಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಿದ್ದರು. ಆದರೆ ಭಾನುವಾರ ಬೆಳಗ್ಗೆ ಮನೆಗೆ ಬಂದ ನರಸಪ್ಪ, ಮೊಬೈಲ್ ನೋಡಬೇಡ, ಇಷ್ಟು ಹೊತ್ತಾದರೂ ಎದ್ದಿಲ್ಲ ಅಂತ ಮಗಳಿಗೆ ಬೈದಿದ್ದಾರೆ. ಅದೇ ಕೋಪದಲ್ಲಿ ಮೊಬೈಲ್ ಹೊಡೆದು ಹಾಕಿ ಮನೆಗೆ ಚಿಲಕ ಹಾಕಿಕೊಂಡು ಮನೆಯಿಂದ ಹೊರಟು ಹೋಗಿದ್ದ ಜಯಶ್ರೀ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. ಇದನ್ನೂ ಓದಿ: ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ – ಅಷ್ಟಮಂಗಲ ಪ್ರಶ್ನೆಗೆ ಮುಂದಾದ ವಿಹೆಚ್ಪಿ
ನಿರ್ಜನ ಪ್ರದೇಶಕ್ಕೆ ತೆರಳಿ ದೊಡ್ಡದಾದ ಜಾಲಿ ಮರಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯುವತಿ ಅಕ್ಕ ಭವ್ಯಗೆ ಮದುವೆನಿಶ್ಚಯವಾಗಿದ್ದು, ಇದೇ ಕಾರಣಕ್ಕೆ ಅಕ್ಕ, ತಂಗಿ ನಡುವೆ ಮೊಬೈಲ್ಗಾಗಿ ಆಗಾಗ ಜಗಳ ನಡೆಯುತ್ತಿತ್ತಂತೆ. ಮದುವೆಗೆ ಯಾರಿಗೋ ದುಡ್ಡು ಕೇಳಿದ್ದೀವಿ, ಅವರು ಫೋನ್ ಮಾಡುತ್ತೇವೆ ಅಂತ ಹೇಳಿದ್ದರು. ಇದೇ ಗೊಂದಲದಲ್ಲಿದ್ದ ನಾವು ಕರೆಗಾಗಿ ಕಾಯುತ್ತಿದ್ದೇವು. ಈ ವೇಳೆ ಜಯಶ್ರೀ ಫೋನ್ ನೋಡುತ್ತಿದ್ದರಿಂದ ಚಾರ್ಜಿಂಗ್ ಖಾಲಿ ಆಗುತ್ತದೆ ಎಂದು ಬೈದು ಬುದ್ಧಿವಾದ ಹೇಳಿದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಜಯಲಕ್ಷಮ್ಮ ಅಳಲು ತೋಡಿಕೊಂಡಿದ್ದಾರೆ.
ಭಾನುವಾರ ಮನೆಯಿಂದ ಹೋದ ಜಯಶ್ರೀ ಶವವಾಗಿ ಇಂದು ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಅಷ್ಟು ದೂರ ಹೋಗುವ ಅವಶ್ಯಕತೆ ಇರಲಿಲ್ಲ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ