ಕೊಪ್ಪಳ: ತಲ್ಲೂರು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಸೋಮವಾರ ಯಶ್-ರಾಧಿಕಾ ದಂಪತಿ ಬಾಗಿನ ಅರ್ಪಿಸಿದ್ದಾರೆ.
ಇಂದು ಹೆಲಿಕಾಪ್ಟರ್ ಮೂಲಕ ಯಶ್ ದಂಪತಿ ಸುಮಾರು 11 ಗಂಟೆಗೆ ಕೊಪ್ಪಳಕ್ಕೆ ಬಂದಿಳಿದರು. ಅವರಿಗಾಗಿ ಶಾಮಿಯಾನ, ಬ್ಯಾನರ್ ಎಲ್ಲವನ್ನು ಹಾಕಿ ಸಿದ್ಧ ಮಾಡಿಕೊಂಡು ಅಭಿಮಾನಿಗಳು ಕೆರೆಯ ಬಳಿ ಕಾಯುತ್ತಿದ್ದರು. ಹೆಲಿಕಾಪ್ಟರ್ ಮೂಲಕ ಮೇಲಿಂದ ತಲ್ಲೂರು ಕೆರೆಯನ್ನು ಸಂಪೂರ್ಣವಾಗಿ ದಂಪತಿ ವೀಕ್ಷಿಸಿ ಆನಂದ ಪಟ್ಟರು.
ಕೆರೆ ಬಳಿ ಬಂದು ಇಬ್ಬರು ಪೂಜೆ ಸಲ್ಲಿಸಿ ನಂತರ ಬಾಗಿನವನ್ನು ಅರ್ಪಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶೋಮಾರ್ಗದ ಕಾರ್ಯದ ಬಗ್ಗೆ ರೈತರೊಂದಿಗೆ, ಗ್ರಾಮಸ್ಥರೊಂದಿಗೆ ಸಂತಸದಿಂದ ಮಾತನಾಡಿದ್ದಾರೆ. ರಾಜಕೀಯಕ್ಕೆ ಬರುತ್ತೀರಾ ಎಂದು ಅಭಿಮಾನಿಗಳು ಕೇಳಿದಕ್ಕೆ ಯಶ್, ನಾನು ರಾಜಕೀಯಕ್ಕೆ ಬರುವುದಿಲ್ಲ. ಒಂದು ವೇಳೆ ರಾಜಕೀಯಕ್ಕೆ ಬರಬೇಕಿದ್ದರೆ ಇಲ್ಲಿಗೆ ಬಂದು ಕೆರೆ ಕಾಯಕ ಮಾಡಬೇಕಿರಲಿಲ್ಲ. ನಮ್ಮ ಭಾಗದಲ್ಲಿಯೇ ಈ ಕಾರ್ಯವನ್ನು ಮಾಡಬಹುದಿತ್ತು ಎಂದು ಹೇಳಿದರು.
ಬತ್ತಿಹೋಗಿದ್ದ ಕೆರೆ ಈಗ ನೀರಿನಿಂದ ತುಂಬಿ ಹೂಳೆಯುತ್ತಿದೆ. ಇದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ. ಇದು ಕೇವಲ ಯಶ್ ಒಬ್ಬನಿಂದ ಇಂತಹ ಕೆರೆ ಕಾಯಕ ಆಗೋದಿಲ್ಲ. ಕೆರೆ ಅಭಿವೃದ್ಧಿಗೆ ಎಲ್ಲರೂ ಮುಂದೆ ಬರಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದರು.
ಸತತ ಮೂರ್ನಾಲ್ಕು ವರ್ಷಗಳ ಬರದಿಂದ ಸಂಪೂರ್ಣವಾಗಿ 96 ಎಕರೆ ವಿಸ್ತೀರ್ಣದ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಅಲ್ಲದೇ ಸಂಪೂರ್ಣವಾಗಿ ಹೂಳು ಕೂಡಾ ತುಂಬಿಕೊಂಡಿತ್ತು. ಕೆರೆಯಲ್ಲಿ ತುಂಬಿರೋ ಹೂಳು ತಗೆಯಲು ಕಳೆದ ಫೆಬ್ರವರಿ ತಿಂಗಳಲ್ಲಿ ಹೂಳು ತಗೆಯಲು ಯಶ್ ದಂಪತಿ ಚಾಲನೆ ನೀಡಿದ್ದರು. ಅಂದು ನೀಡಿದ್ದ ಕೆರೆ ಕಾಯಕಕ್ಕೆ ಈಗ ಸಾರ್ಥಕತೆ ಸಿಕ್ಕಿದೆ. ಇದರಿಂದ ಸುಮಾರು 10 ಕ್ಕೂ ಹೆಚ್ಚು ಗ್ರಾಮಗಳಲ್ಲಿನ ರೈತರಿಗೆ ಅನುಕೂಲವಾಗಲಿದೆ.
ನಟ ಯಶ್ ಮಾಡಿರುವ ಈ ಕಾರ್ಯವನ್ನ ರೈತರು ಕೊಂಡಾಡುತ್ತಿದ್ದು, ಬರದ ನಾಡಿನ ಭಗೀರಥ ಬಂದಂಗ ಬಂದು ನಮ್ಮೂರು ಕೆರೆ ಅಭಿವೃದ್ಧಿ ಪಡಿಸಿದ್ದಾರೆ. ಈ ಬಾರಿ ಮಳೆಯೂ ಚೆನ್ನಾಗಿ ಆಯ್ತು, ಕೆರೆನೂ ತುಂಬಿದೆ ಅಂತ ಗ್ರಾಮಸ್ಥರು ಸಂತಸವನ್ನು ಹಂಚಿಕೊಂಡಿದ್ದಾರೆ.
ಯಶೋಮಾರ್ಗದ ಮೂಲಕ ತಲ್ಲೂರು ಕೆರೆಯನ್ನು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ.
https://www.youtube.com/watch?v=hKy92VBhRAY
https://www.youtube.com/watch?v=JRN6dKohV5k
https://www.youtube.com/watch?v=n1r_Ui38aCI