ಮಂಡ್ಯ: ಮಾಲೀಕರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ನಿಖಿಲ್ ಬಹಿರಂಗವಾಗಿ ಯಶ್ಗೆ ಟಾಂಗ್ ಕೊಟ್ಟಿದ್ದರು. ಅವರ ಹೇಳಿಕೆಗೆ ಇಂದು ಮತ್ತೆ ಗ್ರಾಮಸ್ಥರು ಒತ್ತಾಯದ ಮೇರೆಗೆ ನಟ ಯಶ್ ಟಾಂಗ್ ಕೊಟ್ಟಿದ್ದಾರೆ.
ಉಮ್ಮಡಹಳ್ಳಿಯ ಗ್ರಾಮದಲ್ಲಿ ಪ್ರಚಾರ ಮಾಡುವಾಗ ಗ್ರಾಮಸ್ಥರು ನಿಖಿಲ್ಗೆ ಟಾಂಗ್ ಕೊಡಿ ಎಂದು ಒತ್ತಾಯಿಸಿದ್ದಾರೆ. ಆಗ ನಟ ಯಶ್ ಆರಂಭದಲ್ಲಿ ಟಾಂಗ್ ಬೇಡ ಎಂದು ಹೇಳಿದ್ದಾರೆ. ಆದರೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೊನೆಗೆ “ಹೌದಪ್ಪ.. ನನಗೆ ಬಾಡಿಗೆ ಕಟ್ಟುವುದಕ್ಕೆ ಯೋಗ್ಯತೆ ಇಲ್ಲ ಅಂತನೇ ಅಂದುಕೊಳ್ಳಿ. ಆದರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ ಉತ್ತರ ಕರ್ನಾಟಕದಲ್ಲೂ ಇದ್ದಾರೆ. ಕೊಪ್ಪಳ ಅಂತ ಊರಿದೆ. ಅಲ್ಲಿ ಹೋಗಿ ನಾನು ಏನು ಮಾಡಿದ್ದೇನೆ ಎಂದು ಕೇಳಲಿ” ಎಂದು ಗ್ರಾಮಸ್ಥರ ಒತ್ತಾಯಕ್ಕೆ ನಿಖಿಲ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ನಿಖಿಲ್ ಹೇಳಿದ್ದೇನು?
ಮಂಡ್ಯದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ನಿಖಿಲ್, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿಯಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲ ಮಾತನಾಡುತ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದರು.
ಯಶ್ ತಿರುಗೇಟು ನೀಡಿದ್ದು ಹೀಗೆ
ಇಲ್ಲಿ ಯಾರು ಕೂಡ ದುಡ್ಡಿನ ಆಸೆಗೆ ಬಂದಿಲ್ಲ. ಕಳೆದ ಒಂದು ವಾರದಿಂದ ಮಂಡ್ಯದಲ್ಲಿ ಓಡಾಡುತ್ತಿದ್ದು, ಕ್ಷೇತ್ರದ ಎಲ್ಲ ಊರಿನಲ್ಲೂ ಅಂಬರೀಶ್ ಅಣ್ಣನ ಕೊಡುಗೆ ಕಾಣುತ್ತಿದೆ. ನಾವು ಕಳ್ಳೆತ್ತುಗಳಂತೆ ಎಂದು ಹೇಳಿಕೆ ನೀಡಿದ್ದು, ಏನು ಕದ್ದಿದ್ದೀವಿ ಹೇಳಿ ಸ್ವಾಮಿ? ನಾವೂ ಮಾತನಾಡಿದರೆ ಸಿನಿಮಾದವರಂತೆ, ಅವರು ಸತ್ಯಹರಿಶ್ಚಂದ್ರನ ತುಂಡುಗಳ ಎಂದು ಯಶ್ ನಿಖಿಲ್ ಹೇಳಿಕೆಗೆ ತಿರುಗೇಟು ನೀಡಿದ್ದರು.