ಹಾಸನ: ಸಿಲಿಂಡರ್ ಸ್ಫೋಟದಲ್ಲಿ (Cylinder Blast) ಗಾಯಗೊಂಡ ಕಾರ್ಮಿಕನಿಗೆ ಬೇಕರಿ ಮಾಲೀಕ ಚಿಕಿತ್ಸೆ ಕೊಡಿಸದೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.
ಸಕಲೇಶಪುರ (Sakleshpur) ಮೂಲದ ಅಭಿ ಗಂಭೀರವಾಗಿ ಗಾಯಗೊಂಡಿರುವ ಯುವಕ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ತೆಲಂಗಾಣದಲ್ಲಿರುವ (Telangana) ಬೇಲೂರಿನ ಪ್ರತಾಪ್ಗೌಡ ಎಂಬುವವರ ಬೇಕರಿಗೆ ಕೆಲಸಕ್ಕೆ ಸೇರಿದ್ದ. ಜೂ.2 ರಂದು ಬೆಳಿಗ್ಗೆ ಯುವಕ ಬೇಕರಿ ಬಾಗಿಲು ತೆಗೆದ ವೇಳೆ ಸಿಲಿಂಡರ್ ಸ್ಪೋಟವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಕಾರ್ಮಿಕನನ್ನು ಅಕ್ಕಪಕ್ಕದ ಅಂಗಡಿಯವರು ಹಾಗೂ ಸಾರ್ವಜನಿಕರು ತೆಲಂಗಾಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಪರಿಹಾರದ ಹಣಕ್ಕಾಗಿ ಸತ್ತ ವ್ಯಕ್ತಿಯನ್ನು ಪತಿ ಎಂದ ಮಹಿಳೆ
ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರತಾಪ್ಗೌಡ ಐದು ಸಾವಿರ ಹಣ ನೀಡಿ ಊರಿಗೆ ವಾಪಸ್ ತೆರಳುವಂತೆ ಹೇಳಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಅಭಿ ಬಸ್ಸಿನಲ್ಲೇ ಪ್ರಯಾಣಿಸಿ ಹಾಸನದ ಜಿಲ್ಲಾಸ್ಪತ್ರೆ ದಾಖಲಾಗಿದ್ದಾನೆ. ಈಗ ಊಟ ತಿಂಡಿಗೆ ಹಣವಿಲ್ಲದೆ ಬಡ ಕಾರ್ಮಿಕ ಅಭಿ ಪರದಾಡುತ್ತಿದ್ದಾನೆ.
ಈಗ ದೂರವಾಣಿ ಕರೆ ಮಾಡಿದರು ಬೇಕರಿ ಮಾಲೀಕ ಸ್ವೀಕರಿಸುತ್ತಿಲ್ಲ. ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಪ್ರತಾಪ್ಗೌಡ ತನ್ನ ಸಂಬಂಧಿಕರನ್ನು ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸುವಂತೆ ತಿಳಿಸಿದ್ದು, ಅದರಂತೆ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಸಿ ಹೋಗಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯಲು ಆಗದಿದ್ದರೆ ಬೇಲೂರಿಗೆ ಬಾ ಅಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಇದಲ್ಲದೆ ಅಭಿ ಕೆಲಸ ಮಾಡಿರುವ 2 ತಿಂಗಳ ಸಂಬಳವನ್ನು ನೀಡಿಲ್ಲ.
ತಂದೆ ತಾಯಿ ಇಲ್ಲದ ಅನಾಥ ಯುವಕ ಅಭಿ ಕಳೆದ ಎಂಟು ವರ್ಷಗಳಿಂದ ಹಾಸನ ನಗರದ ಹರ್ಷಮಹಲ್ ರಸ್ತೆಯಲ್ಲಿರುವ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ. ಬಳಿಕ ಇತ್ತೀಚೆಗೆ ಉದ್ಯೋಗಕ್ಕಾಗಿ ತೆಲಂಗಾಣಕ್ಕೆ ತೆರಳಿದ್ದ. ಇದನ್ನೂ ಓದಿ: ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ