ಬೆಂಗಳೂರು: ಒಂದೆಡೆ ಸಿಎಂ ವಿಶ್ವಾಸ ಮತಯಾಚನೆ ಗೊಂದಲದಲ್ಲಿದ್ದರೆ ಇನ್ನೊಂದೆಡೆ ಕೆಲಸ ಖಾಯಂಗೊಳಿಸಿವಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರು ಹಾಗೂ ಖಾಸಗಿ ಶಾಲೆಯನ್ನು ಅನುದಾನಕ್ಕೊಳಪಡಿಸುವಂತೆ ಶಿಕ್ಷಕರು ದುಂಬಾಲು ಬಿದ್ದಿದ್ದಾರೆ.
ಗುರುವಾರ ವಿಶ್ವಾಸ ಮತಯಾಚನೆ ಕುರಿತು ಹಾಗೂ ಇನ್ನಿತರೆ ರಾಜಕೀಯ ಬೆಳವಣಿಗೆಗಳ ಕುರಿತು ಸಲಹೆ ಪಡೆಯಲು ಬುಧವಾರ ಸಂಜೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ್ದ ಸಿಎಂಗೆ ನೌಕರರು ಸುತ್ತುವರಿದು ಕೆಲಸವನ್ನು ಖಾಯಂ ಮಾಡಿಸಿಕೊಂಡುವಂತೆ ಗೋಗರೆದರು.
ಖಾಯಂಗೊಳಿಸುವ ಮೂಲಕ ನಮ್ಮನ್ನೂ ಸರ್ಕಾರಿ ನೌಕರರಂತೆ ಪರಿಗಣಿಸಿ ಎಂದು ಸಿಎಂ ಕಾಲಿಗೆ ಬಿದ್ದು ನೌಕರರು ಮನವಿ ಮಾಡಿದರು. ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರೂ ಸಹ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಖಾಸಗಿ ಶಾಲೆಗಳನ್ನು ಅನುದಾನಕ್ಕೊಳಪಡಿಸುವಂತೆ ಬೇಡಿಕೊಂಡರು. ನಡು ರಸ್ತೆಯಲ್ಲಿ ಸಿಎಂ ಕಾಲಿಗೆ ಬಿದ್ದು ಶಿಕ್ಷಕರು ಬಿಕ್ಕಿ ಬಿಕ್ಕಿ ಅತ್ತು ಸಿಎಂಗೆ ಮನವಿ ಸಲ್ಲಿಸಿದ ಪ್ರಸಂಗ ನಡೆಯಿತು.
ಸಿಎಂ ಹೆಚ್ಚು ಮಾತನಾಡದೇ ನೌಕರರ ಅಹವಾಲು ಸ್ವೀಕರಿಸಿ, ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿ ಹೊರಟರು.