ಬೆಂಗಳೂರು: ಪತಿಯ ಕಿರುಕುಳ ತಾಳಲಾರದೇ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜೆ.ಪಿ ನಗರದಲ್ಲಿ ನಡೆದಿದೆ.
ಸುಪ್ರಿತಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಸುಪ್ರಿತಾ ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ ನಗರದ 14ನೇ ಕ್ರಾಸ್ ನಲ್ಲಿರುವ ತನ್ನ ಮನೆಯಲ್ಲಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಶರಣಾಗಿದ್ದಾಳೆ.
ಸುಪ್ರಿತಾ, ಅಕ್ಷಯ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೆ ಇಬ್ಬರಿಗೂ ಕೈ ತುಂಬ ಸಂಬಳ ಬರುತ್ತಿತ್ತು. ಕಳೆದ ತಿಂಗಳಷ್ಟೇ ಸುಪ್ರಿತಾ ಹಾಗೂ ಅಕ್ಷಯ್ ಅದ್ಧೂರಿಯಾಗಿ ತಮ್ಮ ಮಗುವಿನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆದರೆ ಅದೇನಾಯ್ತೋ ಏನೋ ಪತಿ- ಪತ್ನಿ ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿದೆ.
ಪತಿ ಅಕ್ಷಯ್ ಇತ್ತೀಚೆಗೆ ತನ್ನ ಪತ್ನಿಗೆ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಅಲ್ಲದೆ ಮನೆಗೆ ಸ್ನೇಹಿತರನ್ನು ಕರೆದುಕೊಂಡು ಬರೋದು ಮತ್ತೆ ಕೆಲಸಕ್ಕೆ ಎಂದು ಹೊರಗೆ ಹೋದರೆ ರಾತ್ರಿಯಾದರೂ ಮನೆಗೆ ಬರುತ್ತಿರಲಿಲ್ಲ. ಅಲ್ಲದೆ ಸುಪ್ರಿತಾ ಏನೇ ಮಾಡಿದರು ಅಕ್ಷಯ್ ಆಕೆಯನ್ನು ಹೀಯಾಳಿಸುತ್ತಿದ್ದನು. ಇದನ್ನು ಸಹಿಸಿಕೊಂಡಿದ್ದ ಸುಪ್ರಿತಾ ತನ್ನ ಕಷ್ಟವನ್ನು ಅಜ್ಜಿಯ ಬಳಿ ಹೇಳಿಕೊಂಡಿದ್ದಳು ಎಂದು ಅವರ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ ನಗರ ಪೊಲೀಸರು ಸುಪ್ರಿತಾ ಪತಿ ಅಕ್ಷಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.