ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ರಾಶಿ ರಾಶಿ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಅವರ ಮುಂದಿನ ಸಿನಿಮಾ ನರ್ತನ್ ಮಾಡಲಿದ್ದಾರೆ ಎನ್ನುವುದರಿಂದ ಹಿಡಿದು, ಅವರು ತಮಿಳು ನಿರ್ದೇಶಕ ಶಂಕರ್ ಅವರ ಚಿತ್ರಕ್ಕೂ ಸಹಿ ಮಾಡಿದ್ದಾರೆ ಎನ್ನುವತನಕ ಸುದ್ದಿಗಳಿವೆ. ಆದರೆ, ಯಶ್ ಈವರೆಗೂ ಹೊಸ ಸಿನಿಮಾದ ಬಗ್ಗೆ ತುಟಿ ಬಿಚ್ಚಿಲ್ಲ.
ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಸುದ್ದಿ ಹರಡಿದೆ. ಸದ್ಯಕ್ಕೆ ನರ್ತನ್ ಅವರ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲವಾದ್ದರಿಂದ ಅವರು ತಮಿಳು ನಿರ್ದೇಶಕರಿಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ ಈ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಸುದ್ದಿಯೂ ಜೊತೆಗಿದೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!
ನರ್ತನ್ ಜೊತೆ ಮಾಡಬೇಕಿದ್ದ ಸಿನಿಮಾವನ್ನು ಈ ತಮಿಳು ನಿರ್ದೇಶಕರ ಸಿನಿಮಾ ನಂತರ ಮಾಡಲಿದ್ದಾರಂತೆ ಯಶ್. ಅಲ್ಲಿವರೆಗೂ ನರ್ತನ್ ಬೇರೆ ನಟರಿಗೆ ಸಿನಿಮಾ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆ ತಮಿಳು ನಿರ್ದೇಶಕ ಕಂಡಿತಾ ಶಂಕರ್ ಅಲ್ಲವಂತೆ. ಆದರೆ, ಶಂಕರ್ ಅವರಷ್ಟೇ ಖ್ಯಾತಿ ಪಡೆದ ನಿರ್ದೇಶಕರು ಯಶ್ ಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಶ್ ಏನು ಸ್ಪಷ್ಟನೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.