ಕಾರವಾರ: ಕಾಡಾನೆ ಓಡಿಸಲು ಹೋದ ರೈತ ಆನೆ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರ ವಲಯದ ನಾಗನೂರು ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ರೈತರಾದ ದಾವಲಸಾಬ ಜಮಾಲಸಾಬ ಮುಜಾವರ, ಚಂದ್ರು ಚೆನ್ನಪ್ಪನವರ್ ಅವರು ಗಾಯಗೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ದಾವಲಸಾಬ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಚಂದ್ರು ಚೆನ್ನಪ್ಪನವರ್ ಮುಂಡಗೋಡ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗನೂರು ಗ್ರಾಮದ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ರೈತರು ಆನೆಗಳನ್ನು ಓಡಿಸಲು ಮುಂದಾದಾಗ ಘಟನೆ ನಡೆದಿದೆ. ಹಿಂಡಿನಿಂದ ತಪ್ಪಿಸಿಕೊಂಡ ಆನೆಯೊಂದು ಮುಂಭಾಗದಲ್ಲಿದ್ದ ದಾವಲಸಾಬ ಅವರ ಮೇಲೆ ದಾಳಿ ನಡೆಸಿ ದಂತದಿಂದ ತಿವಿದು ಗಾಯಗೊಳಿಸಿದೆ.
ಈ ಘಟನೆಯಿಂದ ಗಾಬರಿಗೊಂಡ ಚಂದು ಚೆನ್ನಾಪುರ ಎಂಬವರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜಮೀನಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.