ಬೆಂಗಳೂರು: ನಾನು ಯಾಕೆ ಸಿಎಂ (Chief Minister) ಆಗಬಾರದು? ಮುನಿಯಪ್ಪ ಯಾಕಾಗಬಾರದು? ಮಹಾದೇವಪ್ಪ ಯಾಕೆ ಆಗಬಾರದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರಶ್ನಿಸಿದ್ದಾರೆ.
ದಲಿತಪರ ಸಂಘಟನೆಗಳು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಸರ್ಕಾರದ ದಲಿತ ಸಮುದಾಯದ ಸಚಿವರುಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಪರಮೇಶ್ವರ್ ಮಾತನಾಡಿದರು. ಇದನ್ನೂ ಓದಿ: 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್ಎಫ್: ಯಾವ ವರ್ಷ ಎಷ್ಟಿತ್ತು?
ನಮ್ಮಲ್ಲಿ ಕೀಳರಿಮೆ ಇರಬಾರದು. ಅದಕ್ಕೆ ನಾನು ಯಾವಾಗಲೂ ನಾನು ಸಿಎಂ ಆಗಬೇಕು ಅಂತ ಹೇಳುತ್ತೇನೆ. ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ನಾವು ಉಳಿದುಕೊಳ್ಳುತ್ತೇವೆ. ಅದು ಬಿಟ್ಟು ಎಡ, ಬಲ ಎಂದು ಹೇಳುತ್ತಿದ್ದರೆ ನಾವು ಏನು ಸಾಧನೆ ಮಾಡುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಇರಬೇಕು ಎಂದರು.
ಕಾಂಗ್ರೆಸ್ಗೆ (Congress) 2018 ರಲ್ಲಿ ಸೋಲಾಯಿತು. ಯಾವ ಸಮುದಾಯವನ್ನು ಕಡೆಗಣಿಸಿದರೋ ಅದರಿಂದ ಪಾಠ ಕಲಿಯಬೇಕಾಯ್ತು ಎಂದು ಪರೋಕ್ಷವಾಗಿ ದಲಿತ ಸಿಎಂ ಮಾಡದ ಕಾರಣ ಕಾಂಗ್ರೆಸ್ಗೆ ಸೋಲಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಆಂತರಿಕ ವಲಯದಲ್ಲಿ ಗೆಲುವಿನ ಪರಾಮರ್ಶೆ ಮಾಡುವಾಗ ಈ ಬಾರಿ ದಲಿತರು (Dalits) ನಮ್ಮ ಕೈ ಹಿಡಿದಿದ್ದಾರೆ ಎಂಬ ಮಾತು ಬಂದಿದೆ. ಮುಸ್ಲಿಮರು 100% ನಮ್ಮ ಕೈ ಹಿಡಿದಿದ್ದಾರೆ ಅಂತ ಮಾತನಾಡುತ್ತಾರೆ. ನಮ್ಮ ಬಗ್ಗೆ ಈಗ ಎಲ್ಲರಿಗೆ ಗೊತ್ತಾಗಿದೆ. 51 ಮೀಸಲು ಕ್ಷೇತ್ರಗಳ ಪೈಕಿ 32 ರಲ್ಲಿ ಗೆದ್ದಿದ್ದೇವೆ. ನಮ್ಮ ಪಕ್ಷದ ಪ್ರಣಾಳಿಕೆ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಮಂಡಿಸುತ್ತೇವೆ ಎಂದರು.