ಅಂದುಕೊಂಡಂತೆ ಆಗಿದ್ದರೆ ಕಾಟೇರ ಸಿನಿಮಾಗೂ ಮೊದಲು ‘ರಾಜ ವೀರಮದಕರಿ ನಾಯಕ’ (Veera Madakari Nayak) ಸಿನಿಮಾ ರೆಡಿ ಆಗಬೇಕಿತ್ತು. ಚಿತ್ರಕ್ಕೆ ಸರಳವಾಗಿ ಮುಹೂರ್ತ ಮಾಡಿ, ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಮಾಡಲಾಗಿತ್ತು. ದರ್ಶನ್ (Darshan) ಅವರಿಗಾಗಿಯೇ ರಾಜೇಂದ್ರ ಸಿಂಗ್ ಬಾಬು (Rajendra Singh Babu)ಸ್ಕ್ರಿಪ್ಟ್ ಬರೆದು, ನಿರ್ದೇಶನಕ್ಕೆ ಮುಂದಾಗಿದ್ದರು. ರಾಕ್ ಲೈನ್ ವೆಂಕಟೇಶ್ (Rock Line Venkatesh) ಈ ಸಿನಿಮಾದ ನಿರ್ಮಾಪಕರು. ಆದರೆ, ದಿಢೀರ್ ಅಂತ ಸಿನಿಮಾ ನಿಂತಿತು. ಈ ಕುರಿತಂತೆ ದರ್ಶನ್ ಮಾತನಾಡಿದ್ದಾರೆ.
ತಮ್ಮದೇ ಅಭಿಮಾನಿಗಳ ಸಂಘದ ಡಿ ಕಂಪೆನಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ದರ್ಶನ್, ವೀರ ಮದಕರಿ ನಾಯಕ ಸಿನಿಮಾ ನಿಲ್ಲಲ್ಲು ಕಾರಣ ಯಾರು? ಯಾಕೆ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಯಿತು ಎನ್ನುವ ಕುರಿತು ಬಹಿರಂಗ ಪಡಿಸಿದ್ದಾರೆ. ಹತ್ತು ದಿನಗಳ ಕಾಲ ಶೂಟಿಂಗ್ ಮಾಡಲಾದ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ದರ್ಶನ್ ಆಡಿದ ಮಾತು ಅವರ ಪ್ರಮಾಣಿಕತೆಗೆ ಸಾಕ್ಷಿಯಾಗಿದೆ.
ಸಿನಿಮಾ ಯಾಕೋ ಹಿಡಿತಕ್ಕೆ ಸಿಗಲಿಲ್ಲ. ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಆಗಿತ್ತು. ವೀರ ಮದಕರಿ ನಾಯಕ ಒಂದು ಜನಾಂಗದ ದೇವರು. ಅವರಿಗೆ ಅಪಚಾರ ಮಾಡಬಾರದು. ಹಾಗಾಗಿ ನಾನೇ ಸಿನಿಮಾ ನಿಲ್ಲಿಸುವಂತೆ ಹೇಳಿದೆ. ಹೇಗೇಗೋ ಸಿನಿಮಾ ಮಾಡಿ ಬೈಯಿಸಿಕೊಳ್ಳೋಕ್ಕಿಂತ ಹಿಡಿತಕ್ಕೆ ಸಿಕ್ಕಾಗ ಮಾಡೋಣ ಅಂತ ಹೇಳಿದೆ ಎಂದಿದ್ದಾರೆ ದರ್ಶನ್. ಈ ಮೂಲಕ ಸಿನಿಮಾ ನಿಲ್ಲಲು ನಾನೇ ಕಾರಣವೆಂದು ಒಪ್ಪಿಕೊಂಡಿದ್ದಾರೆ.
ವೀರ ಮದಕರಿ ನಾಯಕ ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದು ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಈ ಸುದ್ದಿ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಈ ಸಿನಿಮಾವನ್ನು ಸುದೀಪ್ ಮಾಡಬೇಕು ಎಂದು ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಮಾತನಾಡಿದ್ದರು. ಆದರೆ, ದರ್ಶನ್ ಅವರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಸಿನಿಮಾ ಆಗಲೇ ಇಲ್ಲ.