ಚಿಕ್ಕಮಗಳೂರು: ರಾಜ್ಯಕ್ಕೆ ಹೋಲಿಸಿದರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಕೊರೊನಾ ಕೇಸ್ ತುಸು ಕಡಿಮೆಯೇ ಇದೆ. ಆದರೆ ಆ ಸಂಖ್ಯೆ ಕ್ರಮೇಣ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರೋದು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರೋ ಮುಳ್ಳಯ್ಯನಗಿರಿಗೆ ವಾರಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ನಿತ್ಯ 1,000ಕ್ಕೂ ಅಧಿಕ ಪ್ರವಾಸಿಗರು ಮುಳ್ಳಯ್ಯಗಿರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ವಾರಪೂರ್ತಿ ಬರುವ ಪ್ರವಾಸಿಗರಿಂದಲೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್
ಜಿಲ್ಲೆಯಲ್ಲಿ ನಿತ್ಯ 5-10 ಇದ್ದ ಕೇಸ್ ಗಳು ಮೂರನೇ ಅಲೆ ಆರಂಭದಲ್ಲಿ 20-25ಕ್ಕೆ ಬಂದು ನಿಂತಿತ್ತು. ಬಳಿಕ 40-50ರ ಗಡಿಯಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ, ಶನಿವಾರ-ಭಾನುವಾರ ಎರಡೇ ದಿನಕ್ಕೆ ಕ್ರಮವಾಗಿ 174-196ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ನಿತ್ಯ ನೂರರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರೋ ಸೋಂಕನ್ನು ಕಂಡು ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ.
ಮುಳ್ಳಯ್ಯನಗಿರಿಗೆ ವೀಕೆಂಡ್ ಹೊರತುಪಡಿಸಿ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ಇಡೀ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲೂ ಕೊರೊನಾ ರಣಕೇಕೆ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಜಿಲ್ಲೆಯ ಜನ ವೀಕೆಂಡ್ ಕರ್ಫ್ಯೂ ಮುಂದುವರಿಯಲಿ, ಆದರೆ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್ ಸಿಎಂ ಮನವಿ ಪತ್ರ
ಜಿಲ್ಲೆಯಲ್ಲಿ ಈಗಾಗಲೇ ವಸತಿ ಶಾಲೆಗಳಲ್ಲಿ 185 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಕೂಡಲೇ ಪ್ರವಾಸಿಗರಿಗೆ ಬ್ರೇಕ್ ಹಾಕಬೇಕೆಂದು ಜಿಲ್ಲೆಯ ಜನ ಆಗ್ರಹಿಸಿದ್ದಾರೆ.