ಬೆಂಗಳೂರು: ರಾಜ್ಯ ಸರ್ಕಾರಕ್ಕೂ ವೀಕೆಂಡ್ ಕರ್ಫ್ಯೂ ಮಾಡುವ ಆಸೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವೀಕೆಂಡ್ ಕರ್ಫ್ಯೂ ವಿಸ್ತರಣೆಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸಭೆ ಇದೆ. ಜನರು ಭಯ ಪಡುವ ಅವಶ್ಯಕತೆ ಇಲ್ಲ. ಕೊರೊನಾ ತಡೆಗೆ ಅನೇಕ ಕ್ರಮ ತೆಗೆದುಕೊಂಡಿದ್ದೇವೆ. ಕೊರೊನಾ ರೋಗಿಗಳಿಗಾಗಿ ಆಸ್ಪತ್ರೆ, ಔಷಧಿ ಎಲ್ಲಾ ಸಿದ್ಧತೆ ಇದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದು, ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದೆ. ಇನ್ನೂ 1 ವಾರ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದೆ ಅಂತ ನಮಗೆ ಕಂಡು ಬಂದಲ್ಲಿ ವಿನಾಯ್ತಿ ಕೊಡುವ ಬಗ್ಗೆ ಚಿಂತನೆ ಮಾಡುತ್ತೇವೆ. ನಾವು ಲಾಕ್ಡೌನ್ ಮಾಡುವುದಿಲ್ಲ. ಇದರ ಬಗ್ಗೆ ಜನರಿಗೆ ಭಯ ಬೇಡ. ವೀಕೆಂಡ್ ಕರ್ಫ್ಯೂ ವಿಸ್ತರಣೆ ಬಗ್ಗೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ
ಇವತ್ತಿನ ಸಭೆಯಲ್ಲಿ ಸೋಂಕು ತಡೆಗಟ್ಟುವುದಕ್ಕೆ ಏನೇನು ಬದಲಾವಣೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ. ತಜ್ಞರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ. ಯಾರೋ ಒಬ್ಬರನ್ನ ಉಳಿಸಲು ರಾಜ್ಯದ ಜನರ ಜೀವವನ್ನು ಪಣಕ್ಕೆ ಇಡಲು ಆಗುವುದಿಲ್ಲ. ವ್ಯಾಪಾರಿಗಳಿಗೆ ಲಾಭ ಮಾಡಿಕೊಡಲು ಆಗುವುದಿಲ್ಲ. ಜನರ ಜೀವನ ನಮಗೆ ಮುಖ್ಯವಾಗಿದ್ದು, ಈ ಬಗ್ಗೆ ನಾವು ತಜ್ಞರು ಕೊಟ್ಟ ಸಲಹೆ ಜಾರಿ ಮಾಡುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಕೊರೊನಾ ಪಾಸಿಟಿವ್
ಸರ್ಕಾರಕ್ಕೂ ವೀಕೆಂಡ್ ಕರ್ಫ್ಯೂ ಮಾಡುವ ಆಸೆ ಇಲ್ಲ. ಆದರೆ ಜನರ ಜೀವ ನಮಗೆ ಮುಖ್ಯವಾಗಿದೆ. ಶಾಲೆಗಳ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಬೇರೆ ರಾಜ್ಯದಲ್ಲಿ ಈಗಾಗಲೇ ಪಾಸಿಟಿವಿಟಿ ರೇಟ್ ಕಡಿಮೆ ಆಗಿದೆ ಅಂತ ಹೇಳುತ್ತಿದ್ದು, ಆ ವರದಿ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.