ದಾವಣಗೆರೆ: ಉಪಚುನಾವಣೆಯಲ್ಲಿ ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡಬೇಕೋ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯ ಗುಂಡಿ ಸರ್ಕಲ್ನಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ರವೀಂದ್ರನಾಥ್ ಅವರು ಮಾತನಾಡಿದರು. ಬಿಜೆಪಿ ಪಕ್ಷ ಈಗಲೂ ಅಧಿಕಾರದಲ್ಲಿ ಇದೆ. ಹೀಗೆ ಅಧಿಕಾರದಲ್ಲಿ ಉಳಿಯಬೇಕಾದರೆ ಉಪಚುನಾವಣೆಯಲ್ಲಿ ನಾವು ಹೆಚ್ಚಿನ ಸೀಟು ಗೆಲ್ಲಬೇಕು. ಗೆಲ್ಲುವುದಕ್ಕೆ ಏನೇನು ಕುತಂತ್ರ, ತಂತ್ರ ಮಾಡಬೇಕೋ ಮಾಡುತ್ತೇವೆ ಗೆಲ್ಲುತ್ತೇವೆ ಎಂದು ಹೇಳಿದರು.
ಈಗಾಗಲೇ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಪಕ್ಷ ಚುನಾವಣೆಯನ್ನು ಎದುರಿಸುತ್ತದೆ. ನಮಗೆ ಪಕ್ಷದಿಂದ ಎಲ್ಲಿ ಚುನಾವಣಾ ಪ್ರಚಾರ ಮಾಡಲು ಹೇಳುತ್ತಾರೋ ಅಲ್ಲಿಗೆ ನಾವು ಹೋಗುತ್ತೇವೆ, ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.
ಸದ್ಯ ರವೀಂದ್ರನಾಥ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದು, ಉಪಚುನಾವಣೆ ಎದುರು ಇರುವಾಗ ಈ ರೀತಿ ಶಾಸಕ ಹೇಳಿಕೆ ಕೊಟ್ಟಿರುವುದು ಪ್ರತಿಪಕ್ಷ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.