ಬೆಳಗಾವಿ: ನಗರ ಮತ್ತು ಗ್ರಾಮೀಣ ಭಾಗದ ಪರಿಶೀಲನೆ ಮಾಡಿದ್ದೇನೆ. ಅನೇಕ ವಿಚಾರಗಳು ಗಮನಕ್ಕೆ ಬಂದಿವೆ. ಅಪರಾಧಗಳ (Crime) ಸಂಖ್ಯೆ ಗಂಭೀರವಾಗಿ ಪರಿಗಣಿಸಿದ್ದೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G. Parameshwara) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷ 2,500ಕ್ಕೂ ಅಧಿಕ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, 550 ಜನ ಸಾವನ್ನಪ್ಪಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ ಎಂದರು.
ಯಮಕನಮರಡಿ ಚಿನ್ನ (Gold) ನಾಪತ್ತೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳೆದ ಆರು ತಿಂಗಳಲ್ಲಿ ಪೊಲೀಸರ (Police) ಮೇಲೆ ಆರೋಪ ಕೇಳಿ ಬಂದ ಐನೂರು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿದ್ದೇನೆ. ಕೆಲವೊಮ್ಮೆ ಅಮಾಯಕ ಪೊಲೀಸ್ ಸಿಬ್ಬಂದಿ ಮೇಲೆ ಆರೋಪ ಕೇಳಿ ಬಂದಿರುತ್ತದೆ. ಅಲ್ಲದೇ ಕೆಲವು ಕಡೆ ಪೊಲೀಸರೇ ತಪ್ಪು ಮಾಡಿರುತ್ತಾರೆ. ಹಾಗಾಗಿ ಪ್ರತಿಯೊಂದು ಕೇಸ್ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದು, ಆ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಗೃಹ ಸಚಿವರು ತಿಳಿಸಿದರು. ಇದನ್ನೂ ಓದಿ: ಹೆಚ್ಡಿಕೆ ಸ್ವಾಮಿಯೇ ಅಯ್ಯಪ್ಪ ಅಂತಿಲ್ಲ, ಅಮಿತ್ ಅಯ್ಯಪ್ಪ ಅಂತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ
ಹಿಂಡಲಗಾ ಜೈಲಿನಲ್ಲಿನ (Hindalga Jail) ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಜಿ.ಪರಮೇಶ್ವರ ಅವರು, ಹಿಂಡಲಗಾ ಜೈಲಿನಲ್ಲಿ ಅಗತ್ಯ ಸಿಸಿಟಿವಿ, ಜಾಮರ್ ಸೇರಿ ಮತ್ತಿತರ ಸಾಮಗ್ರಿಗಳ ಖರೀದಿಗೆ ಹಣ ಮಂಜೂರಾಗಿದೆ. ಜೈಲು ಅಧಿಕ್ಷಕರ ವರ್ಗಾವಣೆಗೆ ನಿರ್ಧರಿಸಿದ್ದೇವೆ. ಯಾವುದೇ ರೀತಿ ನಿರ್ಲಕ್ಷ್ಯ ವಹಿಸುವುದಿಲ್ಲ. ಜೈಲಿನ ಸುಧಾರಣೆಗೆ ಇನ್ನು ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಔರಾದಕರ್ ವರದಿ ಜಾರಿ ವಿಚಾರ ಎಲ್ಲಿಗೆ ಬಂದಿತು ಎಂಬ ಪ್ರಶ್ನೆಗೆ ಎಲ್ಲಿಗೂ ಬಂದಿಲ್ಲ. ಅದು ಅಲ್ಲಿಯೇ ಇದೆ. ಈಗಾಗಲೇ ಕೆಲವೊಂದು ಪ್ರಸ್ತಾವನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಆದರೆ ಪ್ರಮುಖವಾಗಿ ವೇತನ ಪರಿಷ್ಕರಣೆ ಮಾಡಿಲ್ಲ. ಇದಕ್ಕೆ ಹೆಚ್ಚುವರಿಯಾಗಿ 800-900 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಹಿಂದೆ ಹೇಳಿದ್ದು, ಹಿಂದಿನ ಸರ್ಕಾರ ಇದನ್ನು ಜಾರಿ ತರಲಿಲ್ಲ. ನಾವು ಪರಿಶೀಲಿಸುತ್ತೇವೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ದತ್ತು ಮಾಲೆ ಹಾಕುವೆ ಎಂಬ ಹೇಳಿಕೆ ವಿಚಾರಕ್ಕೆ, ಅವರು ಹಾಕಿಕೊಂಡರೆ ನಾನು ಏನು ಮಾಡಲಿ. ನಾನೂ ಹಾಕೋಬೇಕಾ ಎಂದು ಪ್ರಶ್ನಿಸಿದ ಪರಮೇಶ್ವರ, ಅದು ಅವರ ವೈಯಕ್ತಿಕ ವಿಚಾರ. ಅವರಿಗ ಎನ್ಡಿಎ ಮೈತ್ರಿಕೂಟದಲ್ಲಿದ್ದು, ಅವರಿಗೆ ಹೊಂದಾಣಿಕೆ ಆಗಲು ಈ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಛೇಡಿಸಿದರು.