ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ (VoterID Scam) ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಪೊಲೀಸರು (Police) ನಾಲ್ವರು ಆರ್ಓಗಳನ್ನ ಬಂಧಿಸಿದ್ದಾರೆ.
ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ ವಿಭಾಗ), ಸೊಹೆಲ್ ಅಹಮದ್ (ಶಿವಾಜಿನಗರ), ಚಂದ್ರಶೇಖರ್ (ಮಹಾದೇವಪುರ) ಹಾಗೂ ಆರ್ಆರ್ ನಗರದ ಎಆರ್ಓ ಮಹೇಶ್ ಬಂಧಿತ ಅಧಿಕಾರಿಗಳಾಗಿದ್ದಾರೆ. ಆರ್ಒಗಳು ಖಾಸಗಿ ವ್ಯಕ್ತಿಗಳಿಗೆ ಬಿಎಲ್ಓ ಕಾರ್ಡ್ಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ
ಚುನಾವಣಾ ಆಯೋಗ (Election Commission) ಈಗಾಗಲೇ ಅಧಿಕಾರಿಗಳ ಫೋನ್ ಕರೆ ತನಿಖೆಗೆ ಮುಂದಾಗಿದೆ. ಬಿಬಿಎಂಪಿ (BBMP) ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ರಂಗಪ್ಪ ಅವರು ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರೆ, ಶ್ರೀನಿವಾಸ್ ಅವರು, ಮಹದೇವಪುರ ಕ್ಷೇತ್ರ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮೂರು ಕ್ಷೇತ್ರದಲ್ಲಿ ಬಿಎಲ್ಓ ಐಡಿ ಕಾರ್ಡ್ ಇಟ್ಟುಕೊಂಡು ಸರ್ವೆ ನಡೆಸಲಾಗಿತ್ತು. ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿತು. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಅಮಾನತುಗೊಂಡ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದು, ಬಿಎಲ್ಓ ಎಂಬ ಐಡಿ ಕಾರ್ಡ್ ವಿತರಣೆಗೆ ಅನುಮತಿ ನೀಡಿದ್ದು ಯಾರು? ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆ ಮಾಹಿತಿ ಕದ್ದಿದೆಯಾ? ಹೀಗೆ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸುವ ಸಾಧ್ಯತೆ ಇದೆ.