ಹೈದರಾಬಾದ್: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ಇಂದು ಬೆಳಗ್ಗೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ವಿಶಾಖಪಟ್ಟಣಂ ಮಾರ್ಗವಾಗಿ ಪಶ್ಚಿಮ ಬಂಗಾಳದ ಶಾಲಿಮಾರ್ಗೆ ಪ್ರಯಾಣಿಸುತ್ತಿದ್ದ ಫಲಕ್ನುಮಾ ಎಕ್ಸ್ಪ್ರೆಸ್ ರೈಲು (Falaknuma Superfast Express) ಅನಿರೀಕ್ಷಿತವಾಗಿ ಬೇರ್ಪಟ್ಟಿದೆ (2 ತುಂಡಾಗಿ – Train Splits). ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೇ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿಗಳು (Railway Officials), ರೈಲಿನಲ್ಲಿ ಯಾವುದೇ ಅಲರ್ಟ್ ತಿಳಿಯದೇ ಏಕಾಏಕಿ ಎರಡು ಎಸಿ ಬೋಗಿಗಳು ಬೇರ್ಪಟ್ಟಿವೆ. ಕೂಡಲೇ ಎಚ್ಚೆತ್ತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಲಿ, ಸಾವು-ನೋವಿಗಳಾಗಲಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಏನಾಯ್ತು?
ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಸಿಬ್ಬಂದಿ ಘಟನಾ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿದ್ದಾರೆ. ಅಗತ್ಯ ರಿಪೇರಿ ಮಾಡಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಿದ್ದಾರೆ. ಸುರಕ್ಷತೆಯ ಎಲ್ಲಾ ಪ್ರೋಟೋಕಾಲ್ (ಶಿಷ್ಟಾಚಾರ) ಪಾಲಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಆದಾಗ್ಯೂ ಏಕಾಏಕಿ ಬೋಗಿಗಳು ಬೇರ್ಪಡಲು ಕಾರಣವೇನು ಅನ್ನೋದರ ಕುರಿತು ರೈಲ್ವೇ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ರೈಲು ಸಂಚಾರದ ಮೇಲೆ ಪರಿಣಾಮ
ಫಲಕ್ನುಮಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬೇರ್ಪಟ್ಟ ಕಾರಣದಿಂದಾಗಿ ಬ್ರಹ್ಮಪುರ ಮತ್ತು ವಿಶಾಖಪಟ್ಟಣಂ ನಡುವಿನ ರೈಲು ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿತ್ತು.