ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲನ್ನು ಇದೇ ಅಕ್ಟೋಬರ್ 28 ರಂದು ತೆರೆದು ನವೆಂಬರ್ 6 ರಂದು ಬಾಗಿಲು ಹಾಕಲಾಗುತ್ತದೆ. ಈ ಬಾರಿ ವಿವಿಐಪಿಗಳಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಬರುವುದಕ್ಕಿಂತ ಮುಂಚೆ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ ಈಗ ಕೊರೊನ ನೆಪವೊಡ್ಡಿ ಸಾರ್ವಜನಿಕರಿಗೆ ನೇರ ದರ್ಶನಕ್ಕೆ ಅವಕಾಶವಿಲ್ಲ ಎಂದು ನಿರ್ಧರಿಸಲಾಗಿದ್ದು, ಆನ್ಲೈನ್ ಮೂಲಕ ಮತ್ತು ಹಾಸನ ನಗರದ ಹಲವೆಡೆ ಬೃಹತ್ ಎಲ್ಇಡಿ ಪರದೆ ಹಾಕಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗಾಗಿ ವಿವಿಐಪಿಗಳಿ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಹಾಸನದ ಜನಸಾಮಾನ್ಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅ.28 ರಿಂದ ನ.6 ರವರೆಗೆ ಹಾಸನಾಂಬ ಬಾಗಿಲು ಓಪನ್- ಸಾರ್ವಜನಿಕರ ದರ್ಶನಕ್ಕೆ ಇಲ್ಲ ಅವಕಾಶ
ಬಹುತೇಕ ರಾಜ್ಯದ ಎಲ್ಲ ಪ್ರಮುಖ ದೇವಾಲಯಗಳಲ್ಲೂ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ರಾಜಕಾರಣಿಗಳ ಕಾರ್ಯಕ್ರಮಗಳಲ್ಲಿ ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಎಲ್ಲೂ ಕೊರೊನ ಬರೋದಿಲ್ಲ. ಆದರೆ ಹಾಸನಾಂಬೆ ದೇವಾಲಯದಲ್ಲಿ ಮಾತ್ರ ಕೊರೊನ ಬರುತ್ತ? ಹಾಸನ ಜನರಿಗೊಂದು ನ್ಯಾಯ, ವಿವಿಐಪಿಗಳಿಗೊಂದು ನ್ಯಾಯ ಮಾಡೋದು ಸರಿಯಲ್ಲ. ಹಾಸನಾಂಬೆಯ ಮಕ್ಕಳಾದ ಹಾಸನ ಜನರಿಗೆ ದೇವಿಯ ದರ್ಶನಕ್ಕೆ ಅವಕಾಶ ಇಲ್ಲ ಅನ್ನೋದಾದ್ರೆ, ಯಾವ ವಿವಿಐಪಿಗಳಿಗೂ ದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಹಾಸನದ ಜನರು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ವರ್ಷಕ್ಕೊಮ್ಮೆ ವಾಗಿಲು ತೆರೆಯುವ ಹಾಸನಾಂಬೆ ದೇವರ ದರ್ಶನಕ್ಕೆ ಕೇವಲ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿರುವುದಕ್ಕೆ ಹಾಸನ ಜನರ ತೀವ್ರ ವಿರೋಧವಿದೆ. ದೇವರ ದರ್ಶನಕ್ಕೆ ಕೊರೊನ ಅಡ್ಡಿ ಅನ್ನೋದಾದ್ರೆ ಯಾವ ವಿವಿಐಪಿಗಳಿಗೂ ದರ್ಶನ ನೀಡಬೇಡಿ ಎಂಬ ಹಾಸನ ಜನರ ಮಾತಿಗೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲ ಮಾದಪ್ಪನ ದರ್ಶನ- ಭಕ್ತರ ಆಕ್ರೋಶ