ಧಾರವಾಡ: ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅಂತ್ಯಸಂಸ್ಕಾರದ ಬಳಿಕ ತಿಥಿ ಕಾರ್ಯ ಮಾಡುವುದು ಸಾಮಾನ್ಯ. ಆದರೆ ಮಂಗವೊಂದು ಸಾವನ್ನಪ್ಪಿದ್ದರಿಂದ ಅಂತ್ಯಸಂಸ್ಕಾರದ ಬಳಿಕ ತಿಥಿ ಕೂಡಾ ಮಾಡಿ, ಭರ್ಜರಿ ಊಟ ಹಾಕಿಸಿದ ಅಪರೂಪದ ಸನ್ನಿವೇಶ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ವಾರ ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ಹೊರವಲಯದಲ್ಲಿ ಮಂಗಗಳ ನಡುವೆ ಜಗಳ ನಡೆದಿತ್ತು. ದೊಡ್ಡ ಗುಂಪಿನ ಮಂಗಗಳೆಲ್ಲ ಸೇರಿ ಒಂದು ಮಂಗನನ್ನು ಹೊಡೆದು ಮರದಿಂದ ಕೆಳಗೆ ಉರುಳಿಸಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಮಂಗನನ್ನು ಗ್ರಾಮಸ್ಥರು ನೋಡಿ, ಸಮೀಪದ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗ ಮೃತಪಟ್ಟಿತ್ತು.
ಗ್ರಾಮದಲ್ಲಿ ಮಂಗನ ಅಂತ್ಯಕ್ರಿಯೆ ಮಾಡಿ, ತಿಥಿ ಮಾಡಲು ನಿರ್ಧರಿಸಿದ್ದರು. ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಮಣ್ಣಿನಿಂದಲೇ ಸಮಾಧಿ ನಿರ್ಮಾಣ ಮಾಡಲಾಗಿದೆ. ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಅದರ ಮೇಲೆ ಮಂಗನ ಫೋಟೋವನ್ನು ಇಟ್ಟು ಸಕಲ ಸಂಪ್ರದಾಯಗಳಿಂದ ತಿಥಿ ಕಾರ್ಯ ಹಾಗೂ ಅನ್ನಸಂತರ್ಪಣೆ ಮಾಡಿದ್ದಾರೆ. ಈ ವೇಳೆ ಭಜನೆ ವ್ಯವಸ್ಥೆ ಕೂಡಾ ಇತ್ತು.