ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ನಟ (Actor) ಶ್ರೀನಿವಾಸ್ ಮೂರ್ತಿ (Srinivas Murthy). ಕೇವಲ ನಟರಾಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ (Producer) ಗುರುತಿಸಿಕೊಂಡವರು. ನಟನಾಗಿ ಗೆದ್ದು, ನಿರ್ಮಾಪಕರಾಗಿ ಸೋಲನ್ನುಂಡರು ಸಿನಿಮಾ ಬಗೆಗಿನ ಪ್ರೀತಿ ಯಾವತ್ತಿಗೂ ಅವರಿಗೆ ಕಡಿಮೆ ಆಗಿಲ್ಲ. ಈಗಲೂ ಸಿನಿಮಾ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅವರಿಗೆ ತುಂಬು 75 ವರ್ಷ.
ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಶ್ರೀನಿವಾಸಮೂರ್ತಿ ಅವರಿಗೆ ಈಗ 75 ವರ್ಷ (75 Years). ಅವರ ಬಣ್ಣದ ಬದುಕಿಗೆ 50 ವರ್ಷ. ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ಇದೇ ಮೇ 15 ಹಾಗೂ 16 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತರಕಾರಿ ಚೆನ್ನಿ’ ಹಾಗೂ ‘ಸದಾರಮೆ ಕಳ್ಳ’ ಎಂಬ ಎರಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಕುರಿತು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆ ಯಲ್ಲಿ ಕೆಲಸ ಮಾಡುತ್ತಿದ್ದೆ. ಆ ವೇಳೆ ನಾಟಕದಲ್ಲಿ ಅಭಿನಯಿಸಲು ಪ್ರಾರಂಭ ಮಾಡಿದೆ. ಒಂದು ಸಲ ನನ್ನ ನಾಟಕವನ್ನು ನೋಡಿದ ಬಂಗಾರಪ್ಪನವರು ನನ್ನನ್ನು ಅಭಿನಂದಿಸಿದರು. ಅಲ್ಲಿಂದ ನನ್ನ ನಟನೆ ಮತ್ತಷ್ಟು ಹೆಚ್ಚಾಯಿತು. ತಮಿಳಿನ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಆ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಿಗೆ ತೊಂದರೆಯಾಯಿತು. ‘ಅಪ್ಪು’ ಚಿತ್ರದ ನಂತರ ಪುರಿ ಜಗನ್ನಾಥ್ ಅವರು ತೆಲುಗು ಚಿತ್ರರಂಗಕ್ಕೆ ನನ್ನ ಕರೆದರೂ, ಆಗ ಇಲ್ಲಿ ನಾನು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಅಲ್ಲಿಗೆ ಹೋಗಲಿಲ್ಲ. ರಜನಿಕಾಂತ್ ಅವರು ಸಹ ನೀವು ಯಾಕೆ ತಮಿಳಿನಲ್ಲಿ ನಟಿಸಬಾರದು? ಎಂದು ಕೇಳುತ್ತಿರುತ್ತಾರೆ ಎಂದು ಶ್ರೀನಿವಾಸಮೂರ್ತಿ ಅವರು ಬೇರೆ ಭಾಷೆಗಳಿಂದ ತಮಗೆ ಬಂದಿದ್ದ ಅವಕಾಶಗಳ ಕುರಿತು ಮಾತನಾಡಿದರು.