ಲಕ್ನೋ: ನೀರಾವರಿ ಯೋಜನೆಗಳಿಗೆ ದೇಶದ ಮೊದಲ ಪ್ರಧಾನಿ ಮಾಡಿದ್ದ ಶಂಕುಸ್ಥಾಪನೆಯನ್ನು ಪೂರ್ಣಗೊಳಿಸಲು ಮೋದಿ ಸರ್ಕಾರವೇ ಬರಬೇಕಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಪ್ರಬುದ್ಧ ವರ್ಗ ಸಮ್ಮೇಳನದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ನೀರಾವರಿ ಯೋಜನೆಗಳ ಭೂಮಿ ಪೂಜೆಯನ್ನು 1961ರಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಮಾಡಿದ್ದರು. ಆದರೆ ಅದನ್ನು ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು ಎಂದರು.
ನೆಹರು ಅವರು ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ೫೯ ವರ್ಷಗಳನ್ನು ತೆಗೆದುಕೊಂಡಿತು. ಅಂದು ಹಾಕಲಾಗಿದ್ದ ಯೋಜನೆಯ ಅಡಿಗಲ್ಲು ಕೂಡ ಕೈ ತಪ್ಪಿದೆ. ಜವಾಹರಲಾಲ್ ನೆಹರು ಅವರ ಹೆಸರಿನ ಕಲ್ಲು ಸ್ಥಾಪಿಸಲು ನಾವು ಕೆಲಸ ಮಾಡಿದ್ದೇವೆ ಎಂದು ವ್ಯಂಗ್ಯವಾಡಿದರು.
ಉತ್ತರ ಪ್ರದೇಶವನ್ನು ಮತ್ತೊಮ್ಮೆ ಹೆಮ್ಮೆಯ ರಾಜ್ಯವನ್ನಾಗಿ ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ. ಉತ್ತರ ಪ್ರದೇಶವನ್ನು ಮತ್ತೊಮ್ಮೆ ಅತ್ಯಂತ ಸಮೃದ್ಧ, ಹಾಗೂ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯುವುದು ಬಿಜೆಪಿಯ ಅಜೆಂಡಾವಾಗಿದೆ ಎಂದು ಹೇಳಿದರು.
ಜಾತೀಯತೆ, ರಾಜವಂಶದ ಆಧಾರದ ಮೇಲೆ ನಡೆಯುತ್ತಿರುವ ಸರ್ಕಾರಗಳು ಉತ್ತರ ಪ್ರದೇಶಕ್ಕೆ ಎಂದಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಿದೆ. ಜೊತೆಗೆ ಅಜಮ್ ಖಾನ್, ಅತೀಕ್ ಅಹ್ಮದ್ ಮತ್ತು ಮುಖ್ತಾರ್ ಅನ್ಸಾರಿ ಅವರಿಗೆ 15 ವರ್ಷಗಳ ನಂತರ ಬಂಧಿಸಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ
ಉತ್ತರಪ್ರದೇಶದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದ ಮೇಲೆ ಅಪರಾಧದ ರಾಜಕಾರಣ ಅಂತ್ಯಗೊಂಡಿದೆ. ಇದರಿಂದಾಗಿ ಇಂದು ಅಧಿಕಾರಿಗಳು ಸಂವಿಧಾನ, ಕಾನೂನುಗಳು ಮತ್ತು ನಿಯಮಗಳ ಪ್ರಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಇದರಿಂದಾಗಿ ಅನೇಕ ವಿಷಯಗಳನ್ನು ಸರಿ ಮಾಡಲಾಗುತ್ತಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಉತ್ತರ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ನೀಡಿ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ರಾಮ ಜನ್ಮಭೂಮಿ ವಿವಾದ, ಕಾಶಿ ವಿಶ್ವನಾಥನ ದೇವಸ್ಥಾನ ಮತ್ತು ಮಾ ವಿಂಧ್ಯವಾಸಿನಿ ದೇವಸ್ಥಾನದ ಮೂರು ದೊಡ್ಡ ಸಮಸ್ಯೆಗಳನ್ನು ಸರಿಪಡಿಸಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ
ಅಖಿಲೇಶ್ ಯಾದವ್ ಅವರು ಲಕ್ನೋಗೆ ೨೪ ಗಂಟೆಗಳ ವಿದ್ಯುತ್ ನೀಡುತ್ತಿದ್ದರು. ಆದರೆ ಯೋಗಿ ಸರ್ಕಾರವು ಪ್ರತಿ ಹಳ್ಳಿ ಮತ್ತು ನಗರಕ್ಕೆ ವಿದ್ಯುತ್ ನೀಡಿದೆ ಎಂದು ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.