ಲಕ್ನೋ: ಈ ಬಾರಿಯ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಸಾದುದ್ಧೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದಿಂದ ಸ್ಪರ್ಧಿಸಲು ನಾಲ್ವರು ಹಿಂದೂಗಳಿಗೆ ಟಿಕೆಟ್ ನೀಡಲಾಗಿದೆ. ಈ ಚುನಾವಣೆಯಲ್ಲಿ ಓವೈಸಿ ಪಕ್ಷ ಒಟ್ಟು 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಎಐಎಂನ ರಾಜ್ಯಾಧ್ಯಕ್ಷ ಶೌಕತ್ ಅಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರಿಗೆ ಟಿಕೆಟ್ ನೀಡುತ್ತೇವೆ. ನಾವು ಧರ್ಮದ ಆಧಾರದಲ್ಲಿ ಟಿಕೆಟ್ ನೀಡಲ್ಲ. ಆದರೂ ನಮ್ಮನ್ನು ಕೋಮುವಾದಿಗಳು ಬಣ್ಣಿಸಲಾಗುತ್ತಿದೆ. ಆದರೆ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿಲ್ಲ ಎಂದು ಹೇಳಿದರು.
ಹಿಂದೂ ಅಭ್ಯರ್ಥಿಗಳ ಕುರಿತು ಮಾತನಾಡಿ, ಘಾಜಿಯಾಬಾದ್ನ ಸಾಹಿಬಾಬಾದ್ ಕ್ಷೇತ್ರದಿಂದ ಪಂಡಿತ್ ಮನಮೋಹನ್ ಝಾ, ಬುಧಾನಾ ಕ್ಷೇತ್ರದಿಂದ ಭೀಮ್ ಸಿಂಗ್ ಬಲ್ಯಾನ್, ಮೀರತ್ನ ಹಸ್ತಿನಾಪುರ ಕ್ಷೇತ್ರದಿಂದ ವಿನೋದ್ ಜಾತವ್ ಮತ್ತು ಬಾರಾಬಂಕಿಯ ರಾಮನಗರದಿಂದ ವಿಕಾಸ್ ಶ್ರೀವಾಸ್ತವ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ
ಎಐಎಂಐಎಂ ಜಿಲ್ಲಾಧ್ಯಕ್ಷ ಇಂತೇಜಾರ್ ಅನ್ಸಾರಿ ಮಾತನಾಡಿ, ನಮ್ಮದು ಕೇವಲ ಮುಸ್ಲಿಂ ಪಕ್ಷ ಎಂಬುದು ಸುಳ್ಳು. ನಾವು ಹಲವಾರು ಹಿಂದೂ ಕಾರ್ಯಕರ್ತರನ್ನು ಹೊಂದಿದ್ದೇವೆ. ಆದರೆ ಮುಸ್ಲಿಮರಿಗೆ ತಮ್ಮ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಲು ಬಿಜೆಪಿ ಏಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ