ಲಕ್ನೋ: ಹರಿದ ಶೂ ಕೊಟ್ಟನೆಂದು ಆರೋಪಿಸಿ ಅಂಗಡಿ ಮಾಲೀಕನಿಗೆ ವಕೀಲರೊಬ್ಬರು ನೋಟಿಸ್ ಕಳುಹಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಜ್ಞಾನೇಂದ್ರ ಭನ್ ತ್ರಿಪಾಠಿಯವರು ಸಲ್ಮಾನ್ ಹುಸೇನ್ ಎಂಬವರಿಗೆ ಈ ನೋಟಿಸ್ ಕಳುಹಿಸಿದ್ದಾರೆ.
ನೋಟಿಸ್ನಲ್ಲೇನಿದೆ..?: ತಮ್ಮ ಅಂಗಡಿಯಿಂದ ಖರೀದಿಸಿದ್ದ ಬೂಟುಗಳು ಹರಿದಿದ್ದರಿಂದ ತನ್ನ ಸೋದರಳಿಯನ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದು, ನಾನು ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಯಿತು ಎಂದು ನೋಟಿಸ್ನಲ್ಲಿ ತ್ರಿಪಾಠಿ ತಿಳಿಸಿದ್ದಾರೆ.
ಏನಿದು ಘಟನೆ..?: ವೃತ್ತಿಯಲ್ಲಿ ವಕೀಲರಾಗಿರುವ ತ್ರಿಪಾಠಿಯವರು ಕಳೆದ ವರ್ಷ ನವೆಂಬರ್ 21 ರಂದು ಸಲ್ಮಾನ್ ಹುಸೇನ್ ಅವರ ಅಂಗಡಿಯಿಂದ ಶೂಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆರು ತಿಂಗಳ ವಾರಂಟಿಯೊಂದಿಗೆ ಪ್ರತಿಷ್ಠಿತ ಬ್ರಾಂಡ್ನ ಶೂಗಳು ಎಂದು ಅಂಗಡಿಯವನು ಹೇಳಿದ್ದಾನೆ. ಆದರೆ ಈ ಶೂಗಳು ಕೆಲವೇ ದಿನಗಳಲ್ಲಿ ಹರಿದುಹೋಗಿವೆ. ಈ ಕಾರಣದಿಂದ ತನ್ನ ಸೋದರಳಿಯನ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ಮಾನಸಿಕ ಒತ್ತಡ ಉಂಟಾಗಿದೆ. ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತ್ರಿಪಾಠಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಅಂಗಡಿ ಮಾಲೀಕನಿಗೆ ನೋಟಿಸ್: ಜನವರಿ 19ರಂದು ಅಂಗಡಿಯವರಿಗೆ ನೋಟಿಸ್ ಕಳುಹಿಸಿದ್ದು (Lawyer Given Notice To shop Owner), ಅದರಲ್ಲಿ ಚಿಕಿತ್ಸೆಗೆ 2,100 ರೂ. ಖರ್ಚಾಗಿದ್ದು, ಖರೀದಿಸಿದ ಶೂಗೆ 1,200 ರೂ. ನೀಡಿದ್ದೇನೆ. ಹೀಗಾಗಿ ನನಗೆ 10 ಸಾವಿರ ನೀಡುವಂತೆ ತ್ರಿಪಾಠಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅಂಗಡಿ ಮಾಲೀಕ ಪರಿಹಾರ ನೀಡಲು ವಿಫಲವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಆರೋಪ ನಿರಾಕರಿಸಿದ ಮಾಲೀಕ: ಇತ್ತ ಅಂಗಡಿಯ ಮಾಲೀಕ ಸಲ್ಮಾನ್ ಹುಸೇನ್ ಅವರು ತ್ರಿಪಾಠಿ ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೆ ಅವರು ಪ್ರತಿಷ್ಠಿತ ಬ್ರಾಂಡ್ನ ಶೂಗಳನ್ನು ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತ್ರಿಪಾಠಿಯವರು 50% ರಿಯಾಯಿತಿಯಲ್ಲಿ ಶೂಗಳನ್ನು ಖರೀದಿಸಿದ್ದಾರೆ. ಆರು ತಿಂಗಳೊಳಗೆ ಶೂನ ಅಡಿಭಾಗವು ಹಾನಿಗೊಳಗಾಗುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಏನೂ ಆಗಿಲ್ಲ. ಅವರು ಬಲವಂತವಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ನನ್ನ ಮೇಲೆ ಅವರು ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.