ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಸಹಜವಾಗಿದೆ. ಆದರೆ ಕಾಂಗ್ರೆಸ್ ಸ್ಥಿತಿ ಸಹಜವಾಗಿದೆ ಎಂದು ನಾನು ಹೇಳುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿರುಗೇಟು ನೀಡಿದ್ದಾರೆ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಕಾಶ್ಮೀರದ ಪರಿಸ್ಥಿತಿ ಕುರಿತು ಕೇಳಿದ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಿದರು. ಕಾಶ್ಮೀರದ ಕಣಿವೆಯಲ್ಲಿ ಪರಿಸ್ಥಿತಿ ಸಹಜವಾಗಿದೆ. ಆದರೆ ಕಾಂಗ್ರೆಸ್ ಸ್ಥಿತಿ ಸಹಜವಾಗಿದೆ ಎಂದು ನಾನು ಹೇಳುವುದಿಲ್ಲ. ಏಕೆಂದರೆ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ರಕ್ತಪಾತ ನಡೆಯುತ್ತಿದೆ ಎಂದು ಅವರು ಬಿಂಬಿಸಿದ್ದರು. ಆದರೆ ಆ ರೀತಿ ನಡೆದಿರಲಿಲ್ಲ, ಒಂದೇ ಒಂದು ಬುಲೆಟ್ ಸಹ ಹಾರಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ನಿರ್ಬಂಧಗಳನ್ನು ಹಿಂಪಡೆದ ನಂತರ ಅಲ್ಲಿನ ಜನರ ಪರಿಸ್ಥಿತಿ ಹಾಗೂ ಶಾಲೆಗೆ ಹೋಗುವ ಮಕ್ಕಳ ಸ್ಥಿತಿ ಬಗ್ಗೆ ಉತ್ತರಿಸಿ, ಕಾಶ್ಮೀರದ ಕಣಿವೆಯ ಎಲ್ಲ ಕಡೆ ಸಹಜ ಸ್ಥಿತಿ ಇದೆ. ಆದರೆ ಕಾಂಗ್ರೆಸ್ ಬಗ್ಗೆ ಗೊತ್ತಿಲ್ಲ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಧ್ಯ ಪ್ರವೇಶಿಸಿ, ರಾಮ ರಾಜ್ಯದ ರೀತಿ ಬಿಂಬಿಸಿದರು. ಆದರೆ ಪರಿಸ್ಥತಿ ಆ ರೀತಿ ಇಲ್ಲ, ಇದೇ ಅವರ ಆದರ್ಶ ಆಡಳಿತ. ಕಾಶ್ಮೀರದಲ್ಲಿ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿಲ್ಲ. ಜೈಲಿನಲ್ಲಿಯೇ ಇಡಲಾಗಿದೆ ಇದು ಅಲ್ಲಿನ ಪರಿಸ್ಥಿತಿಯನ್ನು ತಿಳಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಚೌಧರಿ ಅವರ ಆರೋಪವನ್ನು ಅಲ್ಲಗಳೆದ ಅಮಿತ್ ಶಾ, ಶೇ.99.5ರಷ್ಟು ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬರೆದಿದ್ದಾರೆ. 7 ಲಕ್ಷ ರೋಗಿಗಳನ್ನು ಹೊರ ರೋಗಿ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಇದು ಸಹಜ ಸ್ಥಿತಿಯಲ್ಲವೇ? ರಾಜಕೀಯ ಚಟುವಟಿಕೆಗಳು ಪ್ರಾರಂಭವಾವಗುವುದೇ ಇವರ ನಿಜವಾದ ಸಹಜ ಸ್ಥಿತಿಯ ವ್ಯಾಖ್ಯಾನವಾಗಿದೆ. ಜನತೆಯ ಬಗ್ಗೆ ಕಾಂಗ್ರೆಸ್ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಅಮಿತ್ ಶಾ ತಿರುಗೆಟು ನೀಡಿದರು.
370ನೇ ವಿಧಿ ರದ್ದತಿ ನಂತರ ಸ್ತಬ್ಧವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಹುತೇಕ ಕಡೆ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದ್ದು, ಕೆಲವು ಪ್ರದೇಶಗಳಲ್ಲಿ ನಿರ್ಬಂಧನೆಯನ್ನು ಸಡಿಲಗೊಳಿಸಲಾಗಿದೆ.
ಆಗಸ್ಟ್ 5ರಂದು ಹೇರಿದ್ದ ನಿಷಾಧಾಜ್ಞೆಯನ್ನು ತೆರವುಗೊಳಿಸಿದ್ದರಿಂದ ಸ್ಥಗಿತಗೊಂಡಿದ್ದ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದು, ಅಲ್ಲದೆ, ಸರ್ಕಾರಿ ಕಚೇರಿಗಳ ಹಾಜರಾತಿಯಲ್ಲಿಯೂ ಸಹ ಹೆಚ್ಚಾಗಿದೆ.