ಉಡುಪಿ: ನಳಿನ್ ಕುಮಾರ್ ಕಟೀಲ್ ಒಬ್ಬ ಎಳಸು ರಾಜಕಾರಣಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಟೀಲ್ ಮುಂದೊಂದು ದಿನ ಕಂಟಕವಾಗಲಿದ್ದಾರೆ, ನೋಡುತ್ತಿರಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಶಬ್ಧ ಪ್ರಯೋಗದ ಹಿಂದಿನ ಭಾವನೆ ಗೊತ್ತಿಲ್ಲ. ಕಟೀಲ್ ಎಳಸುತನ ಪ್ರಾಯದ ಬಗ್ಗೆ ನನಗೆ ಹೆಮ್ಮೆಯಿದೆ. ವಯೋವೃದ್ಧರನ್ನು ರಾಜ್ಯಾಧ್ಯಕ್ಷ ಮಾಡುವ ಪರಿಪಾಠ ಇದೆ ಎಂದು ಕಾಂಗ್ರೆಸ್ಗೆ ಶ್ರೀನಿವಾಸ ಪೂಜಾರಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್
ಸಂಘಟನೆಯ ಆಧಾರದಲ್ಲಿ ಅಧಿಕಾರ ಪಡೆದ ಯುವಕ ಕಟೀಲ್ ಅವರಿಂದ ಇಡೀ ರಾಜ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯ ಸ್ಪರ್ಶಾನುಭವ ಸಿಕ್ಕಿದೆ. ನಾನು ಒಂದು ರೂಪಾಯಿ ಖರ್ಚು ಮಾಡದೆ ಗೆದ್ದಿದ್ದರೆ ಅದು ಕಟೀಲ್ ಅವರಿಂದಾಗಿದೆ. ಅವರ ಸಂಘಟನೆಯ ಸೂತ್ರವೇ ನನ್ನಂತಹ ಕಾರ್ಯಕರ್ತರ ಗೆಲುವಿಗೆ ಕಾರಣವಾಗಿದೆ ಎಂದು ಕಟೀಲ್ ಕುರಿತಾಗಿ ಮೆಚ್ಚುಗೆಯ ಮಾತನಾಡಿದ್ದಾರೆ.
ಮುಂದಿನ ಚುನಾವಣೆ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎಂದು ಯಡಿಯೂರಪ್ಪ ಹಿಂದೆ ಹೇಳಿದ್ದರು. ಸಿದ್ದರಾಮಯ್ಯ ಹೀಗೆ ಟೀಕಿಸುತ್ತಿರಲಿ. ನಳಿನ್ ಅವರ ಸಂಘಟನೆ ಮುಂದೊಂದು ದಿನ ಸಿದ್ದರಾಮಯ್ಯಗೆ ಕಂಟಕ ಆಗಬಹುದು ಎಂದು ಸಚಿವ ಕೋಟ ಭವಿಷ್ಯದ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್