ಬಾಗಲಕೋಟೆ: ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜನ ಮರ್ಮಾಂಗವನ್ನು ಹಿಚುಕಿ ಕೊಲೆ ಮಾಡಿದ ಅಮಾನವೀಯ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೀರಲಕೇರಿ ಗ್ರಾಮದ ಯಲ್ಲಪ್ಪ ಪಟಾತ್ (85) ಮೃತ ಹಿರಿಯ ವ್ಯಕ್ತಿ. ಯಲ್ಲಪ್ಪ ಅವರ ಮೊಮ್ಮಕ್ಕಳಾದ ಬೀರಪ್ಪ ಪಟಾತ್, ಸೋಮವ್ವ ಕೋರಕೊಪ್ಪ ಕೊಲೆಗೈದ ಆರೋಪಿಗಳು.
ನಡೆದಿದ್ದು ಏನು?
ಮೃತ ಅಜ್ಜ ಯಲ್ಲಪ್ಪ ಅವರು ತಮ್ಮ ಪಾಲಿನ ಆಸ್ತಿಯನ್ನು ಮಗಳ ಹೆಸರಿಗೆ ವರ್ಗಾವಣೆ ಮಾಡಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡೆಸಿದ ಬೀರಪ್ಪ ಹಾಗೂ ಸೋಮವ್ವ ಆಸ್ತಿ ತಮಗೆ ಮಾತ್ರ ಸೇರಬೇಕೆಂದು ಯಲ್ಲಪ್ಪ ಅವರಿಗೆ ತಾಕೀತು ಮಾಡಿದ್ದರು. ಆದರೆ ಇದಕ್ಕೆ ಯಲ್ಲಪ್ಪ ಒಪ್ಪದೇ ಇದ್ದಾಗ
ಜೂನ್ 17 ರಂದು ಕೊಲೆ ಮಾಡಿದ್ದಾರೆ.
ಯಲ್ಲಪ್ಪ ಅವರ ಅಂತ್ಯಸಂಸ್ಕಾರ ಮಾಡಲು ಧಾರ್ಮಿಕ ವಿಧಿವಿಧಾನಕ್ಕೆ ಬೀರಪ್ಪ ಹಾಗೂ ಸೋಮವ್ವ ಮುಂದಾಗಿದ್ದರು. ಕೃತ್ಯದ ಮಾಹಿತಿ ಪಡೆದು ಗ್ರಾಮಕ್ಕೆ ಭೇಟಿ ನೀಡಿದ ಕೆರೂರು ಪೊಲೀಸರು ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು, ಯಲ್ಲಪ್ಪ ಅವರ ಮರ್ಮಾಂಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಂಕೆಯ ಆಧಾರದಲ್ಲಿ ಬೀರಪ್ಪ ಪಟಾತ್ ಮತ್ತು ಸೋಮವ್ವ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳಾದ ಬೀರಪ್ಪ ಪಟಾತ್ ಹಾಗೂ ಸೋಮವ್ವ ಕೋರಕೊಪ್ಪರನ್ನು ಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.