ಚಿಕ್ಕಬಳ್ಳಾಪುರ: ಮದುವೆ ಮುಗಿಸಿಕೊಂಡು ಮರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಿಣಕನಗುರ್ಕಿ ಬಳಿ ನಡೆದಿದೆ.
ಕಾರು ಚಾಲಕ ಮಹೇಶ್ (35) ಹಾಗೂ ನಾಗರಾಜ್ (55) ಮೃತ ದುರ್ದೈವಿಗಳು. ಮೃತರನ್ನು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿಗಳೆಂದು ಗುರುತಿಸಲಾಗಿದೆ.
ಮದುವೆ ಸಮಾರಂಭ ನಿಮಿತ್ತ ನಾಲ್ವರು ಇಂಡಿಕಾ ಕಾರಿನಲ್ಲಿ ಮಂಚೇನಹಳ್ಳಿಯಿಂದ ಲೇಪಾಕ್ಷಿಗೆ ತೆರಳಿದ್ದರು. ಬಳಿಕ ಮದುವೆ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ವೇಳೆ ಮಿಣಕನಗುರ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮಹೇಶ್ ಹಾಗೂ ನಾಗರಾಜ್ ಸ್ಥಳದಲ್ಲೇ ಮೃತಪಟ್ಟರೆ, ಪ್ರವೀಣ್ ಹಾಗೂ ಅಶ್ವತ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಸುದ್ದಿ ತಿಳಿದ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv