ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಟಿವಿಕೆ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ವಿದುಥಲೈ ಚಿರುತ್ತೈಗಲ್ ಕಚ್ಚಿ ಪಕ್ಷಗಳ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚೆನ್ನೈನ ಲೋಕ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಾಪನಾಶಂ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎ.ಎಂ. ಶಾಹಜಹಾನ್, ವಿಸಿಕೆ ಪಕ್ಷದ ನಾಯಕ, ಟಿಂಡಿವನಂ ಕ್ಷೇತ್ರದ ಶಾಸಕ ವನ್ನಿ ಅರಸು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಎ.ಎಂ. ಶಾಹಜಹಾನ್ ಅವರಿಗೆ ಅಲ್ಪ ಸಂಖ್ಯಾತ ಸಮುದಾಯಗಳ ಕಲ್ಯಾಣ ಖಾತೆ ನೀಡಿದ್ದು ವಕ್ಫ್ ಬೋರ್ಡ್ ಅನ್ನೂ ನೋಡಿಕೊಳ್ಳಲಿದ್ದಾರೆ ವನ್ನಿ ಅರಸು ಅವರಿಗೆ ಸಾಮಾಜಿಕ ನ್ಯಾಯ ಖಾತೆ ನೀಡಲಾಗಿದೆ. ಇದರ ಅಡಿಯಲ್ಲಿ ಆದಿ ದ್ರಾವಿಡ ಕಲ್ಯಾಣ ಮತ್ತು ಹಿಲ್ ಟ್ರೈಬ್ಸ್ ವೆಲ್ಫೇರ್ ಖಾತೆಗಳು ಸೇರಿವೆ.
ಈ ವಿಸ್ತರಣೆಯೊಂದಿಗೆ ಟಿವಿಕೆ ಸರ್ಕಾರದಲ್ಲಿ ಸಹಯೋಗಿ ಪಕ್ಷಗಳ ಪಾಲು ಹೆಚ್ಚಾಗಿದೆ. ಇದಕ್ಕೂ ಮುನ್ನ ನಡೆದ ವಿಸ್ತರಣೆಯಲ್ಲಿ 23 ಮಂದಿ ಸಚಿವರನ್ನು ನೇಮಕ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸುಮಾರು 59 ವರ್ಷಗಳ ನಂತರ ತಮಿಳುನಾಡಿನಲ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿತ್ತು.

