ಅಗರ್ತಲಾ: ತ್ರಿಪುರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸುದೀಪ್ ರಾಯ್ ಬರ್ಮನ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಭಾನುವಾರ ರಾತ್ರಿ ಹಲ್ಲೆ ನಡೆಸಿರುವ ಘಟನೆ ಅಗರ್ತಲಾದ ಉಜನ್ ಅಭೋಯ್ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಸುದೀಪ್ ರಾಯ್ ಬರ್ಮನ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜೂನ್ 23ರಂದು ನಡೆಯಲಿರುವ ತ್ರಿಪುರಾ ಉಪಚುನಾವಣೆಗೆ ಅಗರ್ತಲಾದಿಂದ ಸ್ಪರ್ಧಿಸಿರುವ ಸುದೀಪ್ ರಾಯ್ ಬರ್ಮನ್ ಅವರು ಪ್ರಚಾರದ ಸಲುವಾಗಿ ಬೆಂಬಲಿಗರನ್ನು ಭೇಟಿಯಾಗಲು ಉಜನ್ ಅಭೋಯ್ನಗರಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂದಿನಿಂದ 2 ದಿನ ಪ್ರಧಾನಿ ರಾಜ್ಯ ಪ್ರವಾಸ – 20 ಗಂಟೆಯಲ್ಲಿ 10 ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ
ಕಿಡಿಗೇಡಿಗಳು ಸುದೀಪ್ ರಾಯ್ ಬರ್ಮನ್ ಅವರ ಮೇಲೆ ಹಲ್ಲೆ ನಡೆಸಿ, ನಂತರ ಅವರ ಕಾರು ಮತ್ತು ಕಾಂಗ್ರೆಸ್ ಧ್ವಜಗಳನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯದ ಹಿಂದ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: ಬರೋಬ್ಬರಿ 11 ತಿಂಗಳ ಬಳಿಕ ಪ್ರಧಾನಿ ಭೇಟಿಯಾಗಲಿರುವ ಬಿಎಸ್ವೈ
ಈ ಹಿಂದೆ ಸುದೀಪ್ ರಾಯ್ ಬರ್ಮನ್ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಆದರೆ ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಹೀಗಾಗಿ ಈ ವರ್ಷದ ಆರಂಭದಲ್ಲಿ ಸುದೀಪ್ ರಾಯ್ ಬರ್ಮನ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಈ ಮುನ್ನ ಮೇ 2 ರಂದು ಕೆಲವು ಅಪರಿಚಿತ ವ್ಯಕ್ತಿಗಳು ಬರ್ಮನ್ನ ಭದ್ರತಾ ಸಿಬ್ಬಂದಿ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು.