ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಪೇದೆಯ ತಲೆಗೆ ಕಲ್ಲು ಹೊಡೆದು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಬೊಮ್ಮನಹಳ್ಳಿ ಸಿಗ್ನಲ್ನಲ್ಲಿ ನಡೆದಿದೆ.
ಮಡಿವಾಳ ಸಂಚಾರಿ ಪೊಲೀಸ್ ಠಾಣೆಯ ಪೇದೆ ಜಗದೀಶ್ ಇದೇ ತಿಂಗಳು 14ರಂದು ಬೋಮ್ಮನಹಳ್ಳಿ ಸಿಗ್ನಲ್ ನಲ್ಲಿ ಸಂಜೆ ಆರು ಗಂಟೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ರಸ್ತೆ ಪಕ್ಕದಲ್ಲಿ ಆಟೋಗಳು ನಿಂತಿರುವುದನ್ನು ತೆರವುಗೊಳಿಸುತ್ತಿರುವಾಗ ನಿರ್ಮಾಣ ಹಂತದ ಕಟ್ಟಡದಿಂದ ಕಲ್ಲು ಬಿಸಿದ್ದಾರೆ.
ಕಲ್ಲು ಬಿದ್ದ ಪರಿಣಾಮ ಪೇದೆ ಜಗದೀಶ್ ಹಣೆಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಜಗದೀಶ್ ಚಿಕಿತ್ಸೆ ಪಡೆದು ಸಂಪೂರ್ಣ ಚೇತರಿಕೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಘಟನೆ ಸಂಬಂಧ ಪೇದೆ ಜಗದೀಶ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೊಮ್ಮನಹಳ್ಳಿ ಪೊಲೀಸರು ಕಲ್ಲು ಹೊಡೆದ ದುಷ್ಕರ್ಮಿಗಳ ಹುಡುಕಾಟ ನಡೆಸುತ್ತಿದ್ದಾರೆ.