ಮಂಗಳೂರು: ನಗರದ ಉರ್ವಾ ಠಾಣೆ ಪೊಲೀಸರು ನಡೆಸಿದ ದಾಳಿಯಲ್ಲಿ ಕಟ್ಟಡ (Mangaluru) ಕಾರ್ಮಿಕರ ಸೋಗಿನಲ್ಲಿ ಅಡಗಿಕೊಂಡಿದ್ದ ಮೂವರು ಬಾಂಗ್ಲಾದೇಶಿಗರನ್ನು(Bangladeshis) ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರಾಜ್ಶಾಹಿ ಜಿಲ್ಲೆಯ ನೂರ್ ಅಮೀನ್, ಮಹಮ್ಮದ್ ಕೌಸರ್ ಹಾಗೂ ಇಮ್ರಾನ್ ಅಲಿ ಬಂಧಿತ ಬಾಂಗ್ಲಾದೇಶಿಗರು. ಇವರು ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕಳೆದ ಎರಡು ತಿಂಗಳಿಂದ ಮಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮಂಗಳೂರಿನ ಕೋಡಿಕಲ್ ಭಾಗದಲ್ಲಿರುವ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಒಟ್ಟು ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಓರ್ವ ಬಾಂಗ್ಲಾದೇಶಿ ಪರಾರಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: 500 ರೂ. ಡ್ರಾ ಮಾಡಲು ಹೋದ ವೃದ್ಧನಿಗೆ ಶಾಕ್- ತಂದೆ, ಮಗನ ಖಾತೆಯಲ್ಲಿತ್ತು ಬರೋಬ್ಬರಿ 1,500 ಕೋಟಿ ಹಣ
ಒಂದೇ ಕಟ್ಟಡ ಕಾಮಗಾರಿಯಲ್ಲಿ ಎಂಟಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರು ಕೆಲಸ ಮಾಡುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದ್ದು, ಇನ್ನೂ ಹಲವರು ನಗರದಲ್ಲಿ ಅಡಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದಿರುವ ವಲಸೆ ಕಾರ್ಮಿಕರ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಕ್ರಮವಾಗಿ ನೆಲೆಸಿರುವವರ ಪತ್ತೆಗಾಗಿ ನಗರಾದ್ಯಂತ ಕಾರ್ಯಾಚರಣೆ ಮುಂದುವರಿದಿದೆ.ಇದನ್ನೂ ಓದಿ: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಮಾರ್ಗಸೂಚಿ ಬಿಡುಗಡೆ
