ಉಡುಪಿ: ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆ ಸಂಸದೆ ಅವರೇ ವಿಡಿಯೋ ಮಾಡಿ, ನನಗೆ ದುಬೈ, ಮಸ್ಕತ್ ನಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೇರಳದ ಹಿಂದೂ ಕಾರ್ಯಕರ್ತನಿಗೆ ಮಸ್ಕತ್ ನಲ್ಲಿ ಹಲ್ಲೆ ಮಾಡಿದ್ದಾರೆ. ಆ ಘಟನೆಯ ವಿರುದ್ಧ ನಾನು ಸಿಡಿದೆದ್ದಿದ್ದೆ. ಗೃಹ ಸಚಿವ ಅಮಿತ್ ಶಾ ಅವರಿಗೆ ಕೂಡ ಈ ಬಗ್ಗೆ ಪತ್ರ ಬರೆದಿದ್ದೆ. ನನಗೆ ದಿನನಿತ್ಯ ನೂರಾರು ಬೆದರಿಕೆ ಕರೆಗಳು ಬರುತ್ತಿದೆ. ಹಲವಾರು ಅಶ್ಲೀಲ ಕರೆಗಳು ಬರುತ್ತಿದೆ. ಹಲವಾರು ಜನ ದುರುದ್ದೇಶದಿಂದ ಫೋನ್ ಮೇಲೆ ಫೋನ್ ಮಾಡುತ್ತಿದ್ದಾರೆ. ಒಂದೂವರೆ ತಿಂಗಳಿಂದ ಒಂದು ದಿನಾನೂ ನಾನು ವಿಶ್ರಾಂತಿಯನ್ನು ಪಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೊರೊನಾ ಸಂದರ್ಭ ಅಕ್ಕಿ-ದವಸ ಧಾನ್ಯಗಳನ್ನು ನಿರಂತರವಾಗಿ ವಿತರಿಸಿದ್ದೇನೆ. ಒಂದು ದಿನಾನೂ ನಾನು ವಿಶ್ರಾಂತಿಯನ್ನು ತೆಗೆದುಕೊಂಡಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧದ ವಿಚಾರ ಹರಿದಾಡುತ್ತಿದೆ ಎಂದರು.
ವಾಯ್ಸ್ ರೆಕಾರ್ಡ್ ಹರಿಯುತ್ತಿರುವುದರಿಂದ ನನಗೆ ಯಾವುದೇ ಬೇಸರ ಇಲ್ಲ. ದುಬೈ, ಮಸ್ಕತ್ ಹೀಗೆ ಮಧ್ಯ ಪ್ರಾಚ್ಯ ದೇಶದಿಂದ ನೂರಾರು ಬೆದರಿಕೆ ಕರೆ ಬರುತ್ತಿದೆ. ವಾಯ್ಸ್ ರೆಕಾರ್ಡ್ ನ ಹಿಂದಿರುವ ದುರುದ್ದೇಶವನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಿ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್ ಡೌನ್ ಸಂದರ್ಭ ನಾನಂತೂ ವಿಶ್ರಾಂತಿಯನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ.
ಜಿಹಾದಿಗಳು ಎರಡು ಮೂರು ವರ್ಷಗಳಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದೇವೆ. ಕರೆ ಮಾಡಿದ ಆರೋಪಿಗಳನ್ನು ಈವರೆಗೂ ಪೊಲೀಸರು ಪತ್ತೆ ಹಚ್ಚಿಲ್ಲ. ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.